ಶಾಲೆಗೆ ಶಿಕ್ಷಕರೇ ಚಕ್ಕರ್

!ಶಾಲೆಗೆ ಬಂದ ಮಕ್ಕಳು ಮನೆಗೆ ವಾಪಸ್. ಬೆಂಗಳೂರಿಗೆ ತೆರಳಿದ ಶಿಕ್ಷಕರು.ಅನುಮತಿ ಪಡೆಯದೇ ತೆರಳಿದ ಶಿಕ್ಷಕರ ವಿರುದ್ಧ ಕ್ರಮ ಎಂದ ಡಿಡಿಪಿಐ

ಬೆಳಗಾವಿ:

ನಗರದ ಹಲವಾರು ಶಾಲೆಗಳಲ್ಲಿ ಸೋಮವಾರ ಶಿಕ್ಷಕರ ಗೈರುಹಾಜರಿ ಎದ್ದುಕಂಡಿತು. ಇದರಿಂದಾಗಿ ಎಂದಿನಂತೆ ಶಾಲೆಗೆ ಆಗಮಿಸಿದ್ದ ಮಕ್ಕಳು ವಿಧಿಯಿಲ್ಲದೇ ಮನೆಗೆ ಮರಳಬೇಕಾದ ಪ್ರಸಂಗ ಜರುಗಿತು.
ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಸೋಮವಾರ ಹಮ್ಮಿಕೊಂಡಿರುವ ಪ್ರತಿಭಟನೆಗೆ ಜಿಲ್ಲೆಯ ಬಹುತೇಕ ಶಾಲೆಗಳ ಶಿಕ್ಷಕರು ತೆರಳಿದ್ದಾರೆ. ಆದರೆ, ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕರು ಇಲ್ಲದೇ ಹಲವು ಶಾಲೆಗಳಿಗೆ ಬೀಗ ಹಾಕಿದ್ದು ಕಂಡು ಬಂತು. ಇನ್ನು ಕೆಲ ಶಾಲೆಗಳಲ್ಲಿದ್ದ ಶಿಕ್ಷಕರು ಮಕ್ಕಳನ್ನು ಮನೆಗೆ ಕಳುಹಿಸಿಕೊಟ್ಟ ಪ್ರಸಂಗವೂ ನಡೆಯಿತು.

ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ನಂ.21 ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಅಘೋಷಿತ ರಜೆ ತೆಗೆದುಕೊಂಡು ಬೆಂಗಳೂರಿಗೆ ಹೋಗಿದ್ದಾರೆ. ಇದರಿಂದಾಗಿ, ಶಾಲೆ ಇದೆಯೋ ಇಲ್ಲವೋ ಎಂದು ತಿಳಿಯದೆ ಮಕ್ಕಳು ಕೆಲಕಾಲ ಪರದಾಡಬೇಕಾಯಿತು.
ಸುಮಾರು 240 ವಿದ್ಯಾರ್ಥಿಗಳಿರುವ ಸರ್ಕಾರಿ ಕನ್ನಡ ಶಾಲೆ ನಂ.21ರಲ್ಲಿ ಸೋಮವಾರ ಕೇವಲ ಅತಿಥಿ ಶಿಕ್ಷಕರು ಒಬ್ಬರೇ ಪಾಠ ಮಾಡುವ ಪರಿಸ್ಥಿತಿ ಬಂದೊಗಿತ್ತು.

ಅನುಮತಿ ಪಡೆಯದ ಶಿಕ್ಷಕರ ವಿರುದ್ಧ ಕ್ರಮ……
ಬೆಂಗಳೂರಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರು ಬಿಇಒಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಲಾಗಿತ್ತು. ಆದರೂ ಸಹ ಕೆಲ ಶಿಕ್ಷಕರು ಶಾಲೆಗಳಿಗೆ ಅನಧಿಕೃತವಾಗಿ ಗೈರಾಗಿದ್ದಾರೆ. ಈ ಕುರಿತು ದೂರುಗಳು ಬಂದಿದ್ದು, ಶಾಲೆಗೆ ಗೈರಾದ ಶಿಕ್ಷಕರ ಬಗ್ಗೆ ವರದಿ ಪಡೆಯಲಾಗುತ್ತಿದೆ. ಅನುಮತಿ ಪಡೆಯದೇ ಶಾಲೆಗೆ ಗೈರುಹಾಜರಾದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಮೋಹನ್ ಕುಮಾರ್ ಹಂಚಾಟೆ,
ಡಿಡಿಪಿಐ

Leave a Reply

Your email address will not be published. Required fields are marked *

error: Content is protected !!