ಸಂಬಂಧಿಕರಿಗೆ ಉದ್ಯೋಗ ಕೊಟ್ಟರೂ ಕೇಳೊರಿಲ್ಲ.
ಉದ್ಯೋಗಕ್ಕೆ ಏನು ಮಾನದಂಡ?
ಆಯುಕ್ತರ ಗಮನಕ್ಕೆ ಈ ಸಂಗತಿ ಬರಲಿಲ್ಲ ಏಕೆ?
ಪಾರದರ್ಶಕ ನೇಮಕ ಆಗಿದೆಯೇ?
ಬೆಳಗಾವಿ. ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎನ್ನುವ ಶಾಸಕರ ಮತ್ತು ಸರ್ಕಾರದ ಆಸೆಗೆ ತಣ್ಣೀರೆರಚುವ ಕೆಲಸ ಬೆಳಗಾವಿ ಪಾಲಿಕೆಯಲ್ಲಿ ನಡೆಯುತ್ತಿದೆಯೇ?
ಅಂತಹ ಮಾತುಗಳು ಪಾಲಿಕೆಯ ಆವರಣದಲ್ಲಿ ರಿಂಗಣಿಸುತ್ತಿವೆ.
ಬೆಳಗಾವಿ ಮಹಾನಗರ ಪಾಲಿಕೆಯು ಏನೇ ಮಾಡಿದರೂ ಸ್ಥಳೀಕರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಅದೇ ಉದ್ದೇಶವನ್ನು ಸ್ಥಳೀಯ ಜನಪ್ರತಿನಿಧಿಗಳು ಹೊಂದಿರಬೇಕು.

ಈ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಉತ್ತರ ಶಾಸಕ ಆಸೀಫ್ ಶೇಠ ಮುಂತಾದವರು ಪ್ರಯತ್ನಶೀಲರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಪಾಲಿಕೆಯ ನಗರ ಸೇವಕರೊಬ್ಬರು ಈ ಕೆಲಸಕ್ಕೆ ಮಹಾರಾಷ್ಟ್ರ ಮೂಲದವರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಒಂದು ರೀತಿಯಲ್ಲಿ ವಿವಾದ ಸೃಷ್ಟಿಸಿದೆ. ಅಷ್ಟೇ ಅಲ್ಲ ಕೆಲವೊಂದು ಹುದ್ದೆಗಳಿಗೆ ತಮ್ಮ ಹತ್ತಿರದ ಸಂಬಂಧಿಕರನ್ನೇ ನೇಮಕ ಮಾಡಿಕೊಂಡಿರುವುದು ಬಹುತೇಕ ನಗರಸೇವಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ಈ ವಿಷಯ ಈಗಾಗಲೇ ಬಿಜೆಪಿ ನಾಯಕರ ಗಮನಕ್ಕೂ ಹೋಗಿದೆ ಎನ್ನಲಾಗಿದೆ. ಕಳೆದ ದಿನ ಬಿಜೆಪಿ ಮಹಾನಗರ ಅಧ್ಯಕ್ಷ ಅನಿಲ ಬೆನಕೆ ಇದೂ ಸೇರಿದಂತೆ ಇನ್ನೂ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.
ಇದೇ ದಿನಾಂಕ 30 ರಂದು ಬೆಳಗಾವಿಗೆ ಆಗಮಿಸುವ ಶಾಸಕ ಅಭಯ ಪಾಟೀಲರ ಮುಂದೆ ಪ್ರಸ್ತಾಪವಾಗಿ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಗಳಿವೆ.