ಪಿತ್ರಾರ್ಜಿತ ಆಸ್ತಿ ಯಾರಾದರೂ ಬಿಟ್ಟುಕೊಡುತ್ತಾರಾ?: ಬಸವರಾಜ ಬೊಮ್ಮಾಯಿ
ಮೋದಿಯವರು ಮುಂದಿನ ಐದು ವರ್ಷದಲ್ಲಿ ಬಡತನ ಮುಕ್ತ ಭಾರತ ಮಾಡಲಿದ್ದಾರೆ: ಬಸವರಾಜ ಬೊಮ್ಮಾಯಿ
ಗದಗ( ಲಕ್ಷ್ಮೇಶ್ವರ) :ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಮಮಂದಿರ ಕಟ್ಟಿ ರಾಮರಾಜ್ಯ ಮಾಡಲು ಬಂದಿದ್ದಾರೆ. ಮೋದಿಯವರು ಮುಂದಿನ ಐದು ವರ್ಷದಲ್ಲಿ ಬಡತನ ಮುಕ್ತ ಭಾರತ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ನಾಯಿ ಹೇಳಿದ್ದಾರೆ.
ಅವರು ಇಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಶ್ವರ ಪಟ್ಡಣ, ಅಡರಕಟ್ಟಿ, ಗೋಜನೂರು ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ. ಅವರು ಕೊಟ್ಟ ಜಲಜೀವನಮಿಷನ್ ಯೋಜನೆಯಿಂದ ದೇಶದ ಪ್ರತಿ ಮನೆಗೂ ನಳದ ನೀರು ಬರುವಂತೆ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಗೆ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದು, ಸುಮಾರು 75 ಲಕ್ದ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷ ವಾದರೂ ಯಾರೂ ಈ ರೀತಿ ಯೋಚಿಸಿರಲಿಲ್ಲ. ಸೂರಿಲ್ಲದ ಬಡವರಿಗೆ ಶಾಸ್ವತ ಮನೆ ನಿರ್ಮಾಣ, ಮನೆಗಳಿಗೆ ಉಜ್ವಲ ಗ್ಯಾಸ್, ಶೌಚಾಲಯ ನಿರ್ಮಾಣ ಮಾಡುವ ಮೂಲಕ ಮೊದಿಯವರದು ಶಾಸ್ವತ ಗ್ಯಾರೆಂಟಿ ಗಳನ್ನು ನೀಡಿದ್ದಾರೆ.

ಮೋದಿಯವರು ಮುಂದಿನ ಐದು ವರ್ಷ ಮತ್ತೆ ಪ್ರಧಾನಿಯಾದರೆ ಬಡತನ ಮುಕ್ತ ಭಾರತ ಮಾಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ನವರ ತಾತ್ಕಾಲಿಕ ಗ್ಯಾರೆಂಟಿಯಾಗಿವೆ. ಅವರು ಕೊಡುವ ಗ್ಯಾರೆಂಟಿಗಳು ಎಲ್ಕರಿಗೂ ತಲುಪುತ್ತಿಲ್ಲ. ಗ್ಯಾರೆಂಟಿ ಹೆಸರಿನಲ್ಲಿ ಕಾಂಗ್ರೆಸ್ ನವರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡುವುದಾಗಿ ಹೇಳುತ್ತಿದ್ದಾರೆ. ತಂದೆಯ ಆಸ್ತಿ ಮಗನಿಗೆ ಬರಬೇಕಾದರೆ ಸರ್ಕಾರಕ್ಜೆ ಶೇ 55% ರಷ್ಟು ತೆರಿಗೆ ಕಟ್ಟಬೇಕು. ಇಲ್ಲದಿದ್ದರೆ ಅಷ್ಟು ಮೊತ್ತದ ಆಸ್ತಿ ಸರ್ಕಾರಕ್ಕೆ ಬಿಟ್ಟು ಕೊಡಬೇಕು. ನಮ್ಮ ತಾತ ಮುತ್ತಾತನ ಕಾಲದ ಆಸ್ತಿಯನ್ನು ಸರ್ಕಾರಕ್ಕೆ ಕೊಡಿ ಎಂದು ಕೇಳಿದರೆ ಯಾರು ಕೊಡುತ್ತಾರೆ ಎಂದರು.

ಬಿಜೆಪಿ ಕಮಲ ಅರಳುತ್ತದೆ
ಈ ಬಾರಿ ದೇಶಾದ್ಯಂತ ಶೇ ತೊಂಬತ್ತರಷ್ಟು ಜನರ ಮನಸಲ್ಲಿ ಮೋದಿ ಇದ್ದಾರೆ. ಮೋದಿಯರು ಕೊರೊನಾ ಸಂದರ್ಭದಲ್ಲಿ ಉಚಿತ ಲಸಿಕೆ ಕೊಡಿಸಿ ನಮ್ಮೆಲ್ಲರ ಜೀವ ಉಳಿಸಿದ್ದಾರೆ. ಉಚಿತ ಅಕ್ಕಿ ಕೊಡುತ್ತಿದ್ದಾರೆ. ಮನೆಗಳಿಗೆ ನೀರು ಕೊಡುತ್ತಿದ್ದಾರೆ. ಅವರ ಋಣ ತೀರಿಸಲು ಎಲ್ಲರೂ ಬಿಜೆಪಿಗೆ ಆಶೀರ್ವಾದ ಮಾಡಿದರೆ, ದೇಶದಲ್ಲಿ ಮತ್ತೆ ಬಿಜೆಪಿಯ ಕಮಲದ ಹೂ ಅರಳಲಿದೆ ಎಂದು ಹೇಳಿದರು.
ರೋಡ್ ಶೋನಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಾನಶೆಟ್ಡರ್ ಸೇರಿದಂತೆ ಮತ್ತಿತರ ನಾಯಕರು ಹಾಜರಿದ್ದರು.