ಸಂವಿಧಾನ ಪಠಣದೊಂದಿಗೆ ವೈವಾಹಿಕ ಜೀವನಕ್ಕೆ ಆರಂಭ!
ಬೆಳಗಾವಿಯಲ್ಲಿ CHOUGALE ದಂಪತಿಗಳಿಂದ ಸಾಮಾಜಿಕ ಚಿಂತನೆಗೆ ದಿಕ್ಕು ತೋರಿದ ‘ಸಮಾನತೆ’ ವಿವಾಹ
ಬೆಳಗಾವಿ, ಜೂನ್ 8:
ಧಾರ್ಮಿಕ ಶಬ್ದಗಳಿಲ್ಲ, ಮಂಗಳ ಮಂತ್ರಗಳಿಲ್ಲ… ಆದರೆ ತೀವ್ರ ಅರ್ಥಪೂರ್ಣತೆ ಮತ್ತು ಪ್ರಗತಿಪರ ಆದರ್ಶಗಳ ಸಾನ್ನಿಧ್ಯವಿತ್ತು!
ನಗರದ ಮಹಾತ್ಮ ಗಾಂಧಿ ಭವನದಲ್ಲಿ ಜೂನ್ 8ರಂದು ನಡೆದ ‘ಸಂವಿಧಾನ ಶಪಥ ವಿವಾಹ’ ಸಮಾರಂಭವು ಸಮಾಜದಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ಸಂಪ್ರದಾಯಗಳನ್ನು ಪ್ರಶ್ನಿಸುವ, ಹೊಸ ನಿಟ್ಟಿನ ಬದುಕು ಕಟ್ಟುವ ಯುವಜನತೆಯ ಧೈರ್ಯದ ದರ್ಶನವಾಯಿತು.

ವಿಶೇಷ ವಿವಾಹ, ವಿಶೇಷ ಸಂದೇಶ
ದಲಿತ ಹಕ್ಕು ಹೋರಾಟಗಾರ ಮಲ್ಲೇಶ್ ಚೌಗಲೆ ಅವರ ಪುತ್ರ ವಕೀಲ ವಿಶಾಲ್ ಚೌಗಲೆ ಮತ್ತು ಅಜಿತ್ ಕಂಗಳೇಕರ್ ಅವರ ಪುತ್ರಿ ಆರತಿ – ಇಬ್ಬರೂ ಸಹಪ್ರೇಮಿಗಳಾಗಿ, ಬದುಕಿನಲ್ಲಿ ನ್ಯಾಯ, ಸಮಾನತೆ, ಬುದ್ಧಿವಾದದ ಮೌಲ್ಯಗಳನ್ನು ಆಳವಾಗಿ ಆತ್ಮಸಾತ ಮಾಡಿಕೊಂಡು, ಧಾರ್ಮಿಕ ಆಚರಣೆಗಳ ಬದಲು ಭಾರತದ ಸಂವಿಧಾನ ಪೀಠಿಕೆಯ ಶಪಥವನ್ನು ಓದಿ ವಿವಾಹ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಅಂಬೇಡ್ಕರ್ ಸ್ಪೂರ್ತಿಯ ಸಂವೇದನಾಶೀಲ ಕ್ಷಣ
ವಿವಾಹ ವೇದಿಕೆಯಲ್ಲಿ ಧಾರ್ಮಿಕ ಶಾಸ್ತ್ರಗಳ ಬದಲು, ವಕೀಲ ಶ್ಯಾಮಸುಂದರ್ ಪತ್ತಾರ್ ಹಾಗೂ ನಾಗರತ್ನ ಪತ್ತಾರ್ ಮಾರ್ಗದರ್ಶನದಲ್ಲಿ ದಂಪತಿಗಳು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬ ಸಂವಿಧಾನದ ಮೂಲ ಮೌಲ್ಯಗಳಿಗೆ ಶ್ರದ್ಧಾಪೂರ್ವಕ ಶಪಥ ಸ್ವೀಕರಿಸಿದರು.
ವಿವಾಹದ ಸ್ಮರಣೀಯ ಕ್ಷಣಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರ ಭಾವಚಿತ್ರಗಳಿಗೆ ನಮನ ಸಲ್ಲಿಸುವುದು ವಿಶೇಷ ಅರ್ಥವನ್ನೂ ತಾಳಿತ್ತು.
‘ಇದು ಬದಲಾವಣೆಯ ಘೋಷಣೆ’ ಎಂದು ತಂದೆ ಮಲ್ಲೇಶ್ ಚೌಗಲೆ ಘೋಷಿಸಿದರು:

“ಇದು ಕೇವಲ ಮದುವೆ ಅಲ್ಲ. ಇದು ಸಂವಿಧಾನ, ಮಾನವಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಾಂಸ್ಕೃತಿಕ ಕ್ರಾಂತಿಯ ಆರಂಭ,” ಎಂದು ಪೋಷಕರಾಗಿ ಹೆಮ್ಮೆ ವ್ಯಕ್ತಪಡಿಸಿದರು.