Headlines

ಈಸಕ್ಕಿಯ ಆಸೆ ನಾಟಕ ಪ್ರದರ್ಶನ

ರಂಗಸೃಷ್ಟಿ ಉದ್ಘಾಟನೆ; ಈಸಕ್ಕಿಯ ಆಸೆ ನಾಟಕ ಪ್ರದರ್ಶನ

ಬೆಳಗಾವಿ : ರಂಗಸೃಷ್ಟಿ ಎನ್ನುವ ರಂಗಕಲಾವಿದರ ನೂತನ ಸಂಘಟನೆ ಉದ್ಘಾಟನೆ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ಈಚೆಗೆ ಬೆಳಗಾವಿಯಲ್ಲಿ ನಡೆಯಿತು.


ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತೋಂಟದ ಶ್ರೀ ಸಿದ್ದರಾಮ ಸ್ವಾಮಿಗಳು ಉದ್ಘಾಟಿಸಿದರು. ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.
ಈ ವೇಳೆ ಮಾತನಾಡಿದ ಶ್ರೀ ಸಿದ್ಧರಾಮ ಸ್ವಾಮೀಜಿ, ಬಸವಾದಿ ಶರಣರ ವಚನಗಳ ಅಶಯವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ನಾಟಕಗಳಿಂದ ಆಗುತ್ತಿದೆ. ಕಾಯಕ ಮಾಡುವವರು ನಿಜವಾದ ಭಕ್ತರು,
ಕಾಯಕದ ಜೊತೆಗೆ ದಾಸೋಹ ಸಹ ಬಹಳ ಮುಖ್ಯ, ಗಳಿಕೆಯಷ್ಟೇ ಬಳಕೆಯೂ ಮುಖ್ಯ ಎಂದು ಹೇಳಿದರು. ನೂತನ ರಂಗಸೃಷ್ಟಿ ತಂಡಕ್ಕೆ ಅವರು ಶುಭ ಹಾರೈಸಿದರು.


ಮಹಾಂತೇಶ ಕವಟಗಿಮಠ ಮಾತನಾಡಿ, ಸಮಾಜಕ್ಕೆ ಸಂಸ್ಕಾರ ನೀಡುವ, ಯುವ ಜನಾಂಗವನ್ನು ಸರಿದಾರಿಗೆ ತರುವ ಕೆಲಸ ನಾಟಕಗಳಿಂದ ಆಗಬೇಕಿದೆ, ಕಾಯಕದೆಡೆಗೆ ದಾರಿ ತೋರಿಸುವ ಕೆಲಸವಾಗಬೇಕಿದೆ ಎನ್ನುತ್ತ, ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ರಂಗಸೃಷ್ಟಿಗೆ ಶುಭ ಕೋರಿದರು.

ಹಿರಿಯ ಸಾಹಿತಿ ಡಾ. ರಾಮಕೃಷ್ಣ ಮರಾಠೆ ರಚಿಸಿದ, ಶಿರೀಷ್ ಜೋಶಿ ನಿರ್ದೇಶಿಸಿದ ಈಸಕ್ಕಿಯ ಆಸೆ ನಾಟಕ ಈ ವೇಳೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮಧ್ಯೆ ರಂಗಸೃಷ್ಟಿ ಕಲಾವಿದರಿಂದ ಪ್ರದರ್ಶನಗೊಂಡಿತು. ಶರಣಗೌಡ ಪಾಟೀಲ ರಂಗ ವಿನ್ಯಾಸ, ಶಾಂತಾ ಆಚಾರ್ಯ ನೃತ್ಯ ಸಂಯೋಜನೆ, ಮಂಜುಳಾ ಜೋಶಿ ಸಂಗೀತ ನಿರ್ದೇಶನ ಮಾಡಿದ್ದರು.

ಲಿಂಗಾಯತ ಮಹಿಳಾ ಸಮಾಜ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.
ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್, ಉಪಾಧ್ಯಕ್ಷ ಎಂ.ಕೆ.ಹೆಗಡೆ, ರಾಜೇಶ್ವರಿ ಕವಟಗಿಮಠ, ರಾಮಕೃಷ್ಣ ಮರಾಠೆ, ಶಿರೀಷ್ ಜೋಶಿ, ರತ್ಮಪ್ರಭಾ ಬೆಲ್ಲದ, ಶೈಲಜಾ ಭಿಂಗೆ, ನಯನಾ ಗಿರಿಗೌಡರ್, ಕಾವೇರಿ ಖಿಲಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!