10 ದಿನದಲ್ಲಿ ಹಾಲು ಪೂರೈಕೆದಾರರಿಗೆ ಬಿಲ್ ಪಾವತಿ
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಬೆಮೂಲ್ ತನ್ನ ಹಾಲು ಉತ್ಪಾದಕ ಸದಸ್ಯರ ಹೈನುಗಾರಿಕೆಯನ್ನು ಅಭಿವೃದ್ಧಿಗೊಳಿಸಿ, ಉತ್ಪಾದಿತ ಗುಣಮಟ್ಟದ ಹಾಲಿಗೆ ನಿರಂತರ ಮಾರುಕಟ್ಟೆ ದೊರಕಿಸುವ ಮೂಲಕ ತಕ್ಕ ಪ್ರತಿಫಲ ನೀಡಲಾಗುವುದು. ಅಲ್ಲದೆ, ಹಾಲು ಪೂರೈಕೆದಾರರಿಗೆ 10 ದಿನದಲ್ಲಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ನಗರದ ಕೆಪಿಟಿಸಿಎಲ್ ಸಭಾಭವನದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದಲ್ಲಿ ಅತ್ಯುನ್ನತ ತಂತ್ರಜ್ಞಾನವುಳ್ಳ ಮೆಗಾ ಡೇರಿ ನಿರ್ಮಿಸುವ ಮೂಲಕ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವುದರಿಂದ ಆ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಹಾಲು ನೆರೆರಾಜ್ಯ ಹಾಗೂ ಖಾಸಗಿಯವರ ಪಾಲಾಗುತ್ತಿದೆ. ಎಲ್ಲಾ ಹಾಲು ಉತ್ಪಾದಕರು ಖಾಸಗಿಯವರ ಆಮಿಷಗಳಿಗೆ ಒಳಗಾಗದೇ ಪೂರ್ಣ ಪ್ರಮಾಣದ ಹಾಲನ್ನು ಒಕ್ಕೂಟಕ್ಕೆ ಪೂರೈಸಿ ಕರ್ನಾಟಕ ಸರ್ಕಾರದ ಕ್ಷೀರಸಿರಿ ಯೋಜನೆಯಡಿ ಪ್ರೋತ್ಸಾಹಧನ ಮತ್ತು ಇತರೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಉತ್ತರ ಕರ್ನಾಟಕ ಭಾಗದ ಒಕ್ಕೂಟಗಳನ್ನು ನೋಡಿ ಬೆಂಗಳೂರಿನಲ್ಲಿ ನಗುತ್ತಿದ್ದರು. ನಿತ್ಯ ಲಕ್ಷಾಂತರ ಲೀ. ಹಾಲು ಬರುತ್ತಿದ್ದರೂ ಡೇರಿಗಳು ಸುಧಾರಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದರು ಎಂದ ಅವರು, ಬೆಳಗಾವಿ ಹಾಲು ಒಕ್ಕೂಟ ಸುಧಾರಣೆಗೆ ಸಂಕಲ್ಪ ಮಾಡಿದ್ದೇನೆ. ಎಲ್ಲರೂ ಕೂಡಿ ಇದನ್ನು ಉಳಿಸಿ, ಬೆಳೆಸಬೇಕಿದೆ. ನಾನು ಕೆಎಂಎಫ್ ಅಧ್ಯಕ್ಷರಾಗಿದ್ದ ವೇಳೆ ಶೇ.60ರಷ್ಟು ರೈತರು, ಹಾಲು ಉತ್ಪನ್ನಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಇನ್ನೂ ಶೇ.40ರಷ್ಟು ರೈತರ ಸಮಸ್ಯೆ ತಿಳಿದುಕೊಳ್ಳಬೇಕಿದೆ. ನೂರರಷ್ಟು ತಿಳಿದುಕೊಂಡ ಬಳಿಕ ಅಧಿಕಾರಿಗಳನ್ನು ಆಟ ಆಡಿಸುತ್ತೇನೆ ಎಂದು ಹೇಳಿದರು.
400 ಹಾಲು ಉತ್ಪಾದಕ ಸಹಕಾರ ಸಂಘ ಸ್ಥಾಪನೆ:
ಒಕ್ಕೂಟ 2023-24ನೇ ಸಾಲಿನಲ್ಲಿ 648 ಸಂಘಗಳ ಮೂಲಕ ನಿತ್ಯ ಸರಾಸರಿ 1.72 ಲಕ್ಷ ಕೆ.ಜಿ ಹಾಲನ್ನು ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ 400 ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಒಟ್ಟು 8 ರಿಂದ 9 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲೂ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಎಮ್ಮೆ ಹಾಲು ಉತ್ಪಾದಿಸುವ ಜಿಲ್ಲೆಯಾಗಿರುವುದು ಹೆಮ್ಮೆಯ ವಿಷಯ. ಆದ್ದರಿಂದ ಎಲ್ಲ ಸಂಘ, ಬಿಎಂಸಿ ಕೇಂದ್ರಗಳು ಗುಣಮಟ್ಟದ ಹಾಲನ್ನು ಮಾತ್ರ ಸ್ವೀಕರಿಸಿ, ಪೂರೈಸುವುದರಿಂದ ಹೆಚ್ಚಿನ ಮಟ್ಟದಲ್ಲಿ ಎಮ್ಮೆ ಹಾಲು ಮಾರಾಟ ಮಾಡಿ ಸ್ಪರ್ಧಾತ್ಮಕ ದರವನ್ನೂ ಉತ್ಪಾದಕರಿಗೆ ನೀಡಬಹುದಾಗಿದೆ ಎಂದು ವಿವರಿಸಿದರು.
ಪ್ರಸಕ್ತ ಸಾಲಿನಲ್ಲಿ ಹಾಲು ಶೇಖರಣೆ ಹೆಚ್ಚಳವಾಗಿದೆ. ಈ ಹೆಚ್ಚುವರಿ ಹಾಲನ್ನು ಕೆನೆರಹಿತ ಹಾಲಿನ ಪುಡಿಯನ್ನಾಗಿ ಪರಿವರ್ತಿಸಿದ್ದು, ಈ ಹಾಲಿನ ಪುಡಿ ಸ್ಪರ್ಧಾತ್ಮಕ ದರ ಸಿಗದ ಸಮಯದಲ್ಲಿ ಈ ಪುಡಿಯನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತದೆ ಎಂದ ಅವರು, ಸಂಕಷ್ಟ ಪರಿಸ್ಥಿತಿಯಲ್ಲಿಯೂ ಉತ್ತಮ ಗುಣಮಟ್ಟದ ಹಾಲನ್ನು ನಿರಂತರವಾಗಿ ಸ್ವೀಕರಿಸಲಾಗುತ್ತಿದೆ ಎಂದು ಹೇಳುವ ಮೂಲಕ ಹಾಲು ಉತ್ಪಾದಕರಿಗೆ ಪರೋಕ್ಷ ಪ್ರೋತ್ಸಾಹ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರರಿಂದ ಹಾಲು ಸಂಗ್ರಹಿಸಿ, ಸಂಸ್ಕರಿಸಿ, ಹಾಲು ಮತ್ತು ಹಾಲಿನ ಉತ್ಪನ್ನ ತಯಾರಿಸಿ, ಯೋಗ್ಯ ದರದಲ್ಲಿ ಸಕಾಲದಲ್ಲಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಹಾಲು ಉತ್ಪಾದಕರಿಗೆ ಸ್ಪರ್ಧಾತ್ಮಕ ದರ ನೀಡಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಒಕ್ಕೂಟದ ಮುಖ್ಯ ಧ್ಯೇಯವಾಗಿದ್ದು, ಕಳೆದ 4 ದಶಕಗಳಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಹೆಮ್ಮೆಪಟ್ಟರು.
ಒಕ್ಕೂಟದ ಆರ್ಥಿಕ ಸದೃಢತೆ ಹಾಗೂ ಸ್ವಾವಲಂಬನೆಯನ್ನು ಸಾಧಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು, ಹಾಲಿನ ಉತ್ಪನ್ನಗಳನ್ನು ಪೂರೈಸಿ ರಾಜ್ಯದಲ್ಲೇ ಅತ್ಯಂತ ಶ್ರೇಷ್ಠ ಮಾದರಿಯ ಒಕ್ಕೂಟವಾಗಲು ಶ್ರದ್ಧೆಯಿಂದ ಶ್ರಮಿಸಲಾಗುವುದು ಎಂದು ಹೇಳಿದರು.
ಬೆಮೂಲ್ ನಿರ್ದೇಶಕರಾದ ವಿವೇಕರಾವ್ ಪಾಟೀಲ, ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಬಾಬುರಾವ ವಾಘಮೊಡೆ, ವಿರುಪಾಕ್ಷ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸವಿತಾ ಖಾನಪ್ಪಗೋಳ, ಶಂಕರ ಇಟ್ನಾಳ, ಸದೆಪ್ಪ ವಾರಿ, ರಮೇಶ ಅಣ್ಣಿಗೇರಿ, ಸಂಜಯ ಶಿಂತ್ರೆ, ವ್ಯವಸ್ಥಾಪಕನ ನಿರ್ದೇಶಕ ಕೃಷ್ಣಪ್ಪ ಎಂ.ಮತ್ತಿತರರು ಇದ್ದರು.
ಹಾಸ್ಟೆಲ್ ನಿರ್ಮಾಣ
ಒಕ್ಕೂಟ ಆವರಣದಲ್ಲಿ ಕಹಾಮ ಮತ್ತು ಒಕ್ಕೂಟ ಸಹಯೋಗದಲ್ಲಿ ಹಾಲು ಉತ್ಪಾದಕರ ಉನ್ನತ ಶಿಕ್ಷಣ (ಮೆಟ್ರಿಕ್ ನಂತರ) ಪಡೆಯುವ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಾಸ್ಟೆಲ್ ನಿರ್ಮಿಸಿದ್ದು, ಈಗಾಗಲೇ ಹಾಸ್ಟೆಲ್ ಪ್ರವೇಶಾತಿ ಕೋರಿ ಅರ್ಜಿ ಆಹ್ವಾನಿಸಲಾಗಿದೆ. ಇದರ ಸದುಪಯೋಗವನ್ನು ಹಾಲು ಉತ್ಪಾದಕರು ಪಡೆಯಬೇಕು.
-ಬಾಲಚಂದ್ರ ಜಾರಕಿಹೊಳಿ, ಬೆಮೂಲ್ ಅಧ್ಯಕ್ಷ, ಶಾಸಕ