ದಸರಾ ಕಿಶೋರಿ ಪ್ರಶಸ್ತಿ ಪುರಸ್ಕಾರ 🌸
ಬೆಳಗಾವಿಯ ಸ್ವಾತಿ ಪಾಟೀಲ್ಗೆ ಸಚಿವ ಸತೀಶ್ ಜಾರಕಿಹೊಳಿ ಸತ್ಕಾರ
ಬೆಳಗಾವಿ:
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಅಗ್ರ ಸ್ಥಾನ ಪಡೆದು “ದಸರಾ ಕಿಶೋರಿ” ಪ್ರಶಸ್ತಿಯನ್ನು ಗೆದ್ದ ಡಿ.ವೈ. ಸ್ಪೋರ್ಟ್ಸ್ ಹಾಸ್ಟೆಲ್ ವಿದ್ಯಾರ್ಥಿನಿ ಸ್ವಾತಿ ಪಾಟೀಲ್ ಸೇರಿದಂತೆ ವಿಜೇತರಾದ ವಿದ್ಯಾರ್ಥಿನಿಯರನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸತ್ಕರಿಸಿದರು.

ಕುವೆಂಪು ನಗರದ ಸ್ವಗೃಹದಲ್ಲಿ ನಡೆದ ಈ ಸತ್ಕಾರ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಮಹಿಳಾ ಕುಸ್ತಿಪಟುಗಳಿಗೆ ಸಚಿವರು ಗೌರವ ಸೂಚಿಸಿದರು. ಇದೇ ವೇಳೆ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಚಿವರು ಚರ್ಚಿಸಿ ತಕ್ಷಣ ಸ್ಪಂದಿಸಿದರು.
“ಮಹಿಳಾ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೈಸೂರು ದಸರಾ ಮಹೋತ್ಸವದಲ್ಲಿ ‘ದಸರಾ ಕಿಶೋರಿ’ ಪ್ರಶಸ್ತಿ ನೀಡಲಾಗುತ್ತಿದೆ. ಬೆಳಗಾವಿಯ ಸ್ವಾತಿ ಪಾಟೀಲ್ ಈ ಬಾರಿಯ ಗೌರವ ಪಡೆದುಕೊಂಡಿರುವುದು ಜಿಲ್ಲೆಯ ಹೆಮ್ಮೆಯ ವಿಷಯ,” ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ಆಸೀಪ್ (ರಾಜು) ಸೇಠ್, ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ್, ಡಿ.ವೈ. ಸ್ಪೋರ್ಟ್ಸ್ ಹಾಸ್ಟೆಲ್ ತರಬೇತಿದಾರರು ಸ್ಮಿತಾ ಪಾಟೀಲ್ ಹಾಗೂ ಮಂಜುನಾಥ ಮಾದರ ಉಪಸ್ಥಿತರಿದ್ದರು. “ದಸರಾ ಕಿಶೋರಿ” ಪ್ರಶಸ್ತಿಗೆ ಭಾಜನರಾದ ಸ್ವಾತಿ ಪಾಟೀಲ್ ಪೋಷಕರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.