Headlines

ರಮೇಶ ವಿರುದ್ಧ ಸವದಿ ಕಿಡಿ..!

ನಿಮಗೆ ಮಾನ–ಮರ್ಯಾದೆ ಇದ್ದರೆ ನಮ್ಮ ತಾಲೂಕಿಗೆ ಕಾಲಿಡಬಾರದು!” — ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ಕಿಡಿ

ಚಿಕ್ಕೋಡಿ (ಬೆಳಗಾವಿ):
ಅಥಣಿಯ ರಾಜಕೀಯ ಗಾಳಿ ಮತ್ತೊಮ್ಮೆ ಉರಿದಿದೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಮಾತಿನ ಕಹಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
“ನನ್ನಲ್ಲೂ ಶಬ್ದಕೋಶಗಳಿವೆ, ಆದರೆ ನಿಮ್ಮ ರೀತಿ ಮಾತನಾಡಿದರೆ ಜನರು ನನಗೂ ‘ಮೆಂಟಲ್’ ಅಂತಾ ಕರೆಯುತ್ತಾರೆ. ಅದಕ್ಕಾಗಿ ನಾನು ಸೂಕ್ಷ್ಮತೆಯಿಂದ ಉತ್ತರ ನೀಡುತ್ತಿದ್ದೇನೆ. ನಿಮಗೆ ಮಾನ, ಮರ್ಯಾದೆ ಗೊತ್ತಿದ್ದರೆ ನಮ್ಮ ತಾಲೂಕಿಗೆ ಕಾಲಿಡಬಾರದು” ಎಂದು ಸವದಿ ಎಚ್ಚರಿಕೆಯ ಧಾಟಿಯಲ್ಲಿ ಪ್ರತಿಕ್ರಿಯಿಸಿದರು.

ಅವರು ಇಂದು ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಅಥಣಿ ತಾಲೂಕಿನ ಜನರು ರಮೇಶ್ ಜಾರಕಿಹೊಳಿಯನ್ನು ಬಹುಕಾಲದಿಂದ ತಿರಸ್ಕರಿಸಿದ್ದಾರೆ. ಅದೇ ಜನರು ಮುಂದಿನ ಚುನಾವಣೆಯಲ್ಲೂ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. 2028ರ ಚುನಾವಣೆ ಜನರ ತೀರ್ಪಿನ ಕಲ್ಲೆಳೆ ಆಗಲಿದೆ” ಎಂದು ಹೂವಿನೊಳಗೆ ಮುಳ್ಳು ಇರಿಸಿದಂತ ವಾಗ್ದಾಳಿ ನಡೆಸಿದರು.
ಸವದಿ ತಮ್ಮ ರಾಜಕೀಯದ ಸೈದ್ಧಾಂತಿಕ ಹಿನ್ನೆಲೆ ನೆನಪಿಸಿಕೊಂಡು ಹೇಳಿದರು —
“ನಮ್ಮದು ಆಧ್ಯಾತ್ಮ ಹಿನ್ನೆಲೆ ಇರುವ ಮನೆತನ. ಸಂಸ್ಕಾರದಿಂದ ಮಾತಾಡುವುದನ್ನು ನಾನು ಕಲಿತಿದ್ದೇನೆ. ಮೆಂಟಲ್ ಶೈಲಿಯಲ್ಲಿ ಮಾತನಾಡುವುದು ನನ್ನ ಧರ್ಮವಲ್ಲ. ದಡ್ಡನಿಗೆ ಗೌರವದ ಅರ್ಥವೇ ಗೊತ್ತಿಲ್ಲ” ಎಂದು ಜಾರಕಿಹೊಳಿಯ ಮೇಲೆ ನೇರವಾಗಿ ಕಿಡಿ ಹಚ್ಚಿದರು.

ಇದು ಶಿವಯೋಗಿಗಳ ಪುಣ್ಯ ನಾಡು. ಇಲ್ಲಿ ಜನಿಸಿದವರು ಯಾವಾಗ, ಯಾರಿಗೆ, ಹೇಗೆ ಉತ್ತರ ಕೊಡಬೇಕೆಂದು ಚೆನ್ನಾಗಿ ತಿಳಿದವರು. ಹಿಂದೆಯೂ ಕೊಟ್ಟಿದ್ದಾರೆ, ಈಗಲೂ ಕೊಡುತ್ತಾರೆ, ಮುಂದೂ ಕೊಡುತ್ತಾರೆ” ಎಂದು ತಿರುಗೇಟು ನೀಡಿದರು.
ಅದೇ ವೇಳೆ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆಯಲ್ಲಿ ಸೋತ ಮಹೇಶ್ ಕುಮಟಳ್ಳಿ ಕುರಿತು ವ್ಯಂಗ್ಯವಾಡುತ್ತಾ, “ಅವರ ಮೂಲಕ ಮುಗ್ಧ ವ್ಯಕ್ತಿಯನ್ನು ನಾಮಪತ್ರ ಹಾಕಿಸಿದ್ದಾರೆ” ಎಂದರು.
ಇತ್ತೀಚೆಗೆ ರಮೇಶ್ ಜಾರಕಿಹೊಳಿ ಸವದಿ ಕುರಿತು ನೀಡಿದ್ದ ವೈಯಕ್ತಿಕ ಟೀಕೆಗಳಿಂದ ಈ ವಾಗ್ವಾದಕ್ಕೆ ತೆರೆ ಬಿದ್ದಿದ್ದು, ಅಥಣಿ–ಗೋಕಾಕ ರಾಜಕೀಯ ಪೈಪೋಟಿಗೆ ಮತ್ತೆ ಕಿಡಿ ಹಚ್ಚಿದೆ.

Leave a Reply

Your email address will not be published. Required fields are marked *

error: Content is protected !!