ಬೆಳಗಾವಿ.ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ ಕುರಾನ್ ಸುಟ್ಟ ಪ್ರಕರಣ ಈಗ ಸಿಐಡಿಗೆ ವರ್ಗಾವಣೆಗೊಂಡಿದೆ.
ಮಸೀದಿಯಲ್ಲಿನ ಸಿಸಿಟಿವಿ ದುರಸ್ತಿಗೆ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಅಲ್ಲಿನ ಪವಿತ್ರ ಗ್ರಂಥ ಕುರಾನನ್ನು ಜಮೀನಿನಲ್ಲಿ ಸುಟ್ಟಿದ್ದರು.

ಈ ಬಗ್ಗೆ ಮುಸ್ಲೀಂ ಬಾಂಧವರು ಪ್ರತಿಭಟನೆ ನಡೆಸಿದಾಗ ಪೊಲೀಸ್ ಆಯುಕ್ತರು ಮೂರು ದಿನದ ಗಡುವು ಕೇಳಿದ್ದರು. ಆದರೆ ನೀಡಿದ ಗಡುವಿನಲ್ಲಿ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮುಸ್ಲಿಂರು ಚನ್ನಮ್ಮ ವೃತ್ತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಆಗಲೂ ಕೂಡ ಪೊಲೀಸ್ ಆಯುಕ್ತರು ಮತ್ತೇ ಏಳು ದಿನದ ಗಡುವು ಕೇಳಿದ್ದರು.
ಈಗ ಆರೋಪಿಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ.
ಇದೆಲ್ಲದರ ನಡುವೆ ಪೊಲೀಸ್ ಆಯುಕ್ತರು ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಸಿಪಿಐ ಹಿರೇಮಠ ಎಂಬುವರನ್ನು ಅಮಾನತ್ ಮಾಡಿದ್ದರು.
ಆದರೆ ಸಿಪಿಐ ಹಿರೇಮಠ ಅಮಾನತ್ ನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಚನ್ನಮ್ಮ ವೃತ್ತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದವು.

ಈಗ ಪ್ರಕರಣ ಸಿಐಡಿಗೆ ಹೋಗಿದೆ. ಆದರೆ ಈ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಿದ್ದರ ಬಗ್ಗೆಯೂ ಅನುಮಾನದ ಮಾತುಗಳು ಕೇಳಿ ಬರುತ್ತಿವೆ.
ಈಗ ನೂತನ ಆಯುಕ್ತರು ಇದರ ಸತ್ಯಾಸತ್ಯತೆಯನ್ನು ಕೆದುಕಬೇಕಾಗಿದೆ. ಕಾದು ನೋಡಬೇಕು.