: ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ!
ಇ ಬೆಳಗಾವಿ ವಿಶೇಷ
ಬೆಳಗಾವಿ:
ಬಹು ವರ್ಷಗಳಿಂದ ಕಾನೂನು ಮೀರಿ ನಿರ್ಮಾಣಗೊಂಡ ಕಟ್ಟಡಗಳ ವಿರುದ್ಧ ಮೌನವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ, ಈಗ ಮಾತ್ರ ಎಚ್ಚೆತ್ತುಕೊಂಡಿದೆ. ಹೊಸ ಆಯುಕ್ತೆ ಶುಭ ಬಿ. ಅವರು ಅಧಿಕಾರ ವಹಿಸಿಕೊಂಡ ಬಳಿಕ, ನಿಷ್ಕ್ರಿಯ ಪಾಲಿಕೆಯಲ್ಲಿ ಶಿಸ್ತು, ಸ್ಪಷ್ಟತೆ ಮತ್ತು ದಿಟ್ಟತನದ ನವಚೇತನ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಅಕ್ರಮ ಕಟ್ಟಡದ ವಿರುದ್ಧ ನಡೆದ ಮೊದಲ ದಾಳಿ ಬೆಳಗಾವಿ ಪಾಲಿಕೆಯಲ್ಲಿ ಹೊಸ ಅಧ್ಯಾಯಕ್ಕೆ ಬಾಗಿಲುತೆರೆದು, ಸಾರ್ವಜನಿಕರಲ್ಲಿ ನಂಬಿಕೆ, ಕಟ್ಟಡ ಮಾಫಿಯಾದಲ್ಲಿ ಕಂಪು ತಂದಿದೆ!
ಅಕ್ರಮ ಕಟ್ಟಡ ವಿರುದ್ಧ ನ್ಯಾಯದ ಗೆಲುವು!
ಹನುಮಾನ್ ನಗರ 2ನೇ ಸ್ಟೇಜ್ನ ಸ್ಕೀಮ್ ನಂ. 56ರಲ್ಲಿ ಅನಧಿಕೃತವಾಗಿ ನಿರ್ಮಿತವಾದ ಕಟ್ಟಡದ ಬಗ್ಗೆ ಜನರು ದೂರು ನೀಡಿದರೂ ಸಹ, ಪಾಲಿಕೆಯ ನಿರ್ಲಕ್ಷ್ಯದಿಂದ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ.
ಆದರೆ, 2024 ಏಪ್ರಿಲ್ ನಲ್ಲಿ ಜಿಲ್ಲೆಯ ಸತ್ರ ನ್ಯಾಯಾಲಯವು ಕಟ್ಟಡದ ಭಾಗವನ್ನು ತೆರವುಗೊಳಿಸಲು ಸ್ಪಷ್ಟ ಆದೇಶ ನೀಡಿತು. ಈ ಆದೇಶ ಗಂಭೀರವಾಗಿ ಪರಿಗಣಿಸಿದ ಆಯುಕ್ತೆ ಶುಭ ಬಿ. ಅವರ ಬಿಗಿ ನಿರ್ಧಾರದಿಂದ ಜಾರಿಗೆ ಬಂತು.

“ಕಾನೂನು ಮೀರಿ ಕಟ್ಟುವವರು ಎಚ್ಚರವಾಗಲಿ” ಎಂಬ ನೇರ ಸಂದೇಶ ಈಗ ನಗರವಾಸಿಗಳಿಗೆ ಕಿವಿಮಾತು!
೩೧ ಜನರ ತಂಡ: ಶಿಸ್ತಿನ ಕಾರ್ಯಾಚರಣೆ!
ಇದರ ತೀರ್ಮಾನದ ಭಾಗವಾಗಿ ಆಯುಕ್ತರು ೩೧ ಮಂದಿ ಅಧಿಕಾರಿಗಳ ತಂಡ ರಚಿಸಿ ತೆರವು ಕಾರ್ಯಾಚರಣೆಗೆ ಆದೇಶ ನೀಡಿದರು. ಬೆಳಿಗ್ಗೆ ಪ್ರಾರಂಭವಾದ ಕಾರ್ಯಾಚರಣೆ ಆರಂಭದಲ್ಲಿ ಟಿಪಿಓ ವಿಭಾಗದ ಕೆಲವರು ಕಾಲಹರಣದ ಲಕ್ಷಣಗಳನ್ನೂ ತೋರಿದರು.

ಆದರೆ, ಮಧ್ಯಾಹ್ನದ ನಂತರ ವಲಯ ಆಯುಕ್ತ ಆನಿಶೆಟ್ಟರ್ ಕೈಗೆತ್ತಿಕೊಂಡು, ನ್ಯಾಯಾಲಯದ ಆದೇಶವನ್ನು ಜವಾಬ್ದಾರಿಯಿಂದ ಜಾರಿಗೆ ತಂದರು. ಒಂದು ರೀತಿಯಲ್ಲಿ ದಿಟ್ಟತನ ಮೆರೆದರು.
” ಇದು ಕೇವಲ ಆರಂಭ ಮಾತ್ರ!”
ಹನುಮಾನ್ ನಗರದಲ್ಲಿ ಮೊದಲ ಬಾರಿಗೆ ಜೆಸಿಬಿ ದಾಳಿ ನಡೆಸಿದ್ದು ಕೇವಲ ಒಂದು ಬಿಲ್ಲು ಮಾತ್ರ. ಪಾಲಿಕೆಯು ಈಗ 321 ಸೆಕ್ಷನ್ ಅಡಿಯಲ್ಲಿ ಹಲವು ಕಟ್ಟಡಗಳ ಪಟ್ಟಿ ಸಿದ್ಧಪಡಿಸಿದೆ.
ನಿಯಮ ಉಲ್ಲಂಘನೆಗೆ ಮರುಕವಿಲ್ಲ ಎಂಬ ಶಿಸ್ತು ವ್ಯವಸ್ಥೆ ಈಗ ಕಾರ್ಯರೂಪಕ್ಕೆ ಬರುತ್ತಿರುವುದು ಬೆಳಗಾವಿಗರಿಗೆ ಹೊಸ ಅಶಾಭಾವನೆ ತರುತ್ತಿದೆ.
” ಶಹಬ್ಬಾಷ್!” ಎನ್ನುತ್ತಿರುವ ಬೆಳಗಾವಿಗರು

ಅಯೋಗ್ಯರಿಗೆ ಆಶ್ರಯ ನೀಡುವ ಬದಲು ನಿಯಮ ಪಾಲನೆಗೆ ಬದ್ಧಳಾದ ಆಯುಕ್ತೆ ಶುಭ ಬಿ. ಅವರ ಶೈಲಿ, ಇಂದಿನ ಪಾಲಿಕೆಯಲ್ಲಿ ಶುದ್ಧತೆ ಮತ್ತು ಬದ್ಧತೆಯ ಹೊಸ ಚರಿತ್ರೆ ಬರೆಯುತ್ತಿದೆ.
ಜನಪ್ರತಿನಿಧಿಗಳ ಮೌನಕ್ಕೂ, ಲಾಲೂಚು ಧೋರಣಿಗೂ ಪ್ರತ್ಯುತ್ತರವಾಗಿ, ಸಾರ್ವಜನಿಕರು ಆಯುಕ್ತೆಗೆ “ಶಹಬ್ಬಾಷ್” ಎನ್ನುತ್ತಿದ್ದಾರೆ.
ಬೆಂಗಳೂರಿನ ನಂತರ ಬೆಳಗಾವಿ ಪಾಲಿಕೆಗೆ “ಶ್ರೀಮಂತ ಪಾಲಿಕೆ” ಎಂಬ ಹೊಸ ಖ್ಯಾತಿ ಬರಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.
* ಅಧಿಕಾರಿಗಳ ವಿರುದ್ಧ ಕ್ರಮ *ಏಕಿಲ್ಲ* ?
ಕೊರ್ಟ್ ಆದೇಶವನ್ನೂ ಪಾಲಿಸದ ಸೆಕ್ಷನ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲೇಬೇಕು ಎಂಬ ಕೂಗು ಕೇಳಿ ಬರುತ್ತಿದೆ
ಇನ್ನೊಂದೆಡೆ ಟಿಪಿಒ ಸೆಕ್ಷನ್ನಲ್ಲಿ ಮಂಜೂರಾದ ಇತರೆ ಅಕ್ರಮ ನಕ್ಷೆಗಳಿಗೆ ಸಂಬಂಧಿಸಿದಂತೆ ಪಾಲಿಕೆ ತನಿಖೆ ಬೇಕೆಂಬ ಬೇಡಿಕೆಯೂ ಮೊಳಗುತ್ತಿದೆ.
ಇದು ಕೇವಲ ಒಂದು ಕಟ್ಟಡವಲ್ಲ – ಇದು ಇಡೀ ವ್ಯವಸ್ಥೆಗೆ ನೀಡಬೇಕಾದ ಒಂದು ಪಾಠ!