Headlines

ಮಳೆಯಲ್ಲೇ ಆಯುಕ್ತರ ಸಿಟಿ ರೌಂಡ್..!

ಬೆಳಗಾವಿ,
ಗಡಿನಾಡ ಬೆಳಗಾವಿಯಲ್ಲಿ ಮಳೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ, ಮಹಾನಗರ ಪಾಲಿಕೆಯ ಆಯುಕ್ತೆ ಶುಭಾ ಬಿ ಅವರ ಕಾರ್ಯಶೈಲಿ ಸಾರ್ವಜನಿಕ ಶ್ಲಾಘೆಗೆ ಪಾತ್ರವಾಗುತ್ತಿದೆ.

ಆಯುಕ್ತರು ರೇನಕೋಟ್ ಧರಿಸಿ ಮಳೆಯಲ್ಲಿಯೇ ಶಾಂತಿನಗರದಿಂದ ಶಹಾಪುರದವರೆಗೆ ವಿವಿಧ ತಗ್ಗು ಪ್ರದೇಶಗಳಲ್ಲಿ ಭೇಟಿ ನೀಡಿ ವೈಯಕ್ತಿಕವಾಗಿ ವೀಕ್ಷಣೆ ನಡೆಸಿದರು.

ಭಾರೀ ಮಳೆಯಿಂದಾಗಿ ಹಲವೆಡೆ ಚರಂಡಿಗಳು ಹರಿದೋಡದೆ ನೀರು ನಿಂತಿದ್ದು, ಕೆಲ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಾಂತಿನಗರ, ಮರಾಠಾ ಕಾಲೋನಿ, ನಾನಾವಾಡಿ, ಕೊನವಾಳ ಗಲ್ಲಿ ಮುಂತಾದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚು ಎದ್ದುಕಾಣುತ್ತಿದೆ.

ಆಯುಕ್ತೆ ಅವರ ಮಾರ್ಗದರ್ಶನದಲ್ಲಿ, ನಗರ ಪಾಲಿಕೆ ತುರ್ತು ನಿರ್ವಹಣೆಗೆ ತಕ್ಷಣ ಸ್ಪಂದಿಸಿ, ಮೂರು ಜೆಸಿಬಿ, ಎರಡು ಜಟ್ಟಿಂಗ್ ವಾಹನ ಮತ್ತು ಸಕಿಂಗ್ ವಾಹನಗಳನ್ನು ಹಸ್ತಾಂತರಿಸಿ ಒಳಚರಂಡಿ ಹಾಗೂ ನಾಲಾಗಳ ಶುದ್ಧೀಕರಣ ಕಾರ್ಯಾಚರಣೆ ಆರಂಭಿಸಿದೆ. ಗಟಾರುಗಳು ಹಾಗೂ ಕಸದ ಬಳಕೆಯಿಂದ ತಡೆಗಟ್ಟಲಾಗಿರುವ ಸ್ಥಳಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮಳೆ ಹಾನಿಯನ್ನು ನಿಯಂತ್ರಿಸುವಲ್ಲಿ ಶ್ರಮಿಸಲಾಗುತ್ತಿದೆ.

ತುರ್ತು ಪರಿಸ್ಥಿತಿಗೆ ಮೂರು ತಂಡಗಳ ರಚನೆ
ಪಾಲಿಕೆ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮೂರು ವಿಶೇಷ ಕಾರ್ಯದಳಗಳನ್ನು ರಚಿಸಿದ್ದು, ಯಾವುದೇ ತೊಂದರೆ ಉಂಟಾದಲ್ಲಿ ಸ್ಥಳಕ್ಕೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ.

ಈ ನಡುವೆ ಆಯುಕ್ತೆ ಮಾತನಾಡಿ “ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ತಂಡ ಸಿದ್ಧವಿದೆ. ಜನರು ಸಹಕಾರಿ ಮನೋಭಾವದಿಂದ ಕಸವನ್ನು ಸರಿಯಾದ ಸ್ಥಳದಲ್ಲಿ ಹಾಕಲಿ” ಎಂಬ ಮನವಿ ಮುಂದಿಟ್ಟರು.

Leave a Reply

Your email address will not be published. Required fields are marked *

error: Content is protected !!