ಶಾಸಕ ಅಭಯ ಪಾಟೀಲರಿಂದ ಪಾಲಿಕೆ ಅಧಿಕಾರಿಗಳ ಮೇಲೆ ಗುಡುಗು**
45 ಕೋಟಿ ಯುಜಿಡಿ ಯೋಜನೆಯಲ್ಲಿ ದಕ್ಷಿಣಕ್ಕೆ ಕೇವಲ 5 ಕೋಟಿ – ಸಭೆಯಲ್ಲಿ ಸಿಡಿಲು ಸಿಡಿದ ಶಾಸಕ
ಬೆಳಗಾವಿ:
ಮಹಾನಗರ ಪಾಲಿಕೆಯ ಒಳಚರಂಡಿ (ಯುಜಿಡಿ) ಕಾಮಗಾರಿಗಳ ಅನುದಾನ ಹಂಚಿಕೆಯಲ್ಲಿ ನಡೆಯುತ್ತಿರುವ ತೀವ್ರ ಅನ್ಯಾಯವನ್ನು ಪ್ರಶ್ನಿಸಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಪಾಲಿಕೆ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಿಡಿಲಿನಂತೆ ಗುಡುಗಿದರು.
“ನನ್ನ ದಕ್ಷಿಣ ಕ್ಷೇತ್ರಕ್ಕೆ ಕೇವಲ ಎರಡು ಪರ್ಸೆಂಟ್ ಅನುದಾನವೇ? ಇದು ಯಾವ ನ್ಯಾಯ? ಯಾರ ಮಾತು ಕೇಳಿ ಈ ಆಟ ನಡೆಯುತ್ತಿದೆ?” ಎಂದು ಅವರು ಅಧಿಕಾರಿಗಳ ಮೇಜಿನತ್ತ ತಿರುಗಿ ಕಿಡಿಕಾರಿದರು.
ಉತ್ತರ ಮತಕ್ಷೇತ್ರಕ್ಕೆ ಶೇ.60ರಷ್ಟು ಅನುದಾನ ನೀಡಿದರೆ, ಕನಿಷ್ಠ ಶೇ.40 ದಕ್ಷಿಣಕ್ಕೂ ಕೊಡಬೇಕು. ಅದು ಸಾಧ್ಯವಿಲ್ಲ ಎಂದರೂ ಕನಿಷ್ಠ ಶೇ.30 ಕೊಡಿ.
ಆದರೆ ನೀವು ನನ್ನ ಕ್ಷೇತ್ರವನ್ನು ಎರಡು ಪರ್ಸೆಂಟ್ಗೆ ಇಳಿಸಿದ್ದೀರಿ. ಇದು ನೇರ ಅನ್ಯಾಯ. ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ! ಎಂದು ಅಭಯ ಪಾಟೀಲ ಎಚ್ಚರಿಕೆ ನೀಡಿದರು.

ದಕ್ಷಿಣಕ್ಕೆ ಯುಜಿಡಿ ಸಮಸ್ಯೆಯೇ ಇಲ್ಲವೇ?” – ಶಾಸಕರ ಸವಾಲು
“ಒಟ್ಟು 45 ಕೋಟಿ ರೂ. ಯುಜಿಡಿ ಯೋಜನೆಯಲ್ಲಿ ದಕ್ಷಿಣಕ್ಕೆ ಕೇವಲ 5 ಕೋಟಿ ರೂ. ಪೈಪ್ಲೈನ್ ಕೆಲಸ. ಇಂಥ ಅನುದಾನದಿಂದ ಸಮಸ್ಯೆ ಹೇಗೆ ಪರಿಹಾರವಾಗುತ್ತದೆ? ಉತ್ತರ ಕ್ಷೇತ್ರದಲ್ಲೇ ಯುಜಿಡಿ ಸಮಸ್ಯೆಯೇ? ದಕ್ಷಿಣದಲ್ಲಿಲ್ಲವೇ?” ಎಂದು ಅವರು ತೀವ್ರವಾಗಿ ಪ್ರಶ್ನಿಸಿದರು.
“ಈ ಕಾಮಗಾರಿ ಹೇಗೆ ನಡೆಯುತ್ತದೆ ಎಂಬುದನ್ನು ನಾನೇ ನೋಡುತ್ತೇನೆ. ಈ ಅನ್ಯಾಯಕ್ಕೆ ನಾನು ಮೌನವಾಗಿರುವುದಿಲ್ಲ” ಎಂದು ಶಾಸಕರು ಸವಾಲು ಹಾಕುತ್ತಿದ್ದಂತೆ ಸಭಾಂಗಣದಲ್ಲಿ ತೀವ್ರ ನಿಶ್ಶಬ್ದ ಆವರಿಸಿತು. ಅಧಿಕಾರಿಗಳು ಮಾತಿಲ್ಲದೆ ಕುಳಿತಿದ್ದರು

