ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿ
ಕರ್ತವ್ಯನಿಷ್ಠೆಗೆ ಮತ್ತೊಮ್ಮೆ ಮುದ್ರೆ ಹಾಕಿದ ಮುಖ್ಯ ಕಾರ್ಯದರ್ಶಿ
ಬೆಂಗಳೂರು:
ಸಾರ್ವಜನಿಕರ ಸಮಸ್ಯೆಗಳು ಆಡಳಿತದ ಮೇಜುಗಳಲ್ಲೇ ನಿಲ್ಲಬಾರದು, ಜನಪ್ರತಿನಿಧಿಗಳ ಧ್ವನಿಗೆ ತಕ್ಷಣ ಸ್ಪಂದನೆ ದೊರಕಬೇಕು ಎಂಬ ಆಡಳಿತಾತ್ಮಕ ಮೌಲ್ಯವನ್ನು ಮತ್ತೊಮ್ಮೆ ಸ್ಪಷ್ಟವಾಗಿ ಪ್ರತಿಪಾದಿಸಿದವರು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್..!
ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ನಿರ್ಲಕ್ಷ್ಯಿಸುವ ಪ್ರವೃತ್ತಿಗೆ ತೆರೆ ಎಳೆಯುವ ಉದ್ದೇಶದಿಂದ, ಎಲ್ಲಾ ಅಧಿಕಾರಿಗಳು ಶಾಸಕರು, ವಿಧಾನಪರಿಷತ್ ಸದಸ್ಯರು, ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರ ಕರೆಗಳಿಗೆ ಕಡ್ಡಾಯವಾಗಿ ಸ್ಪಂದಿಸಬೇಕು ಎಂಬ ಕಟ್ಟುನಿಟ್ಟಿನ ಸುತ್ತೋಲೆಯನ್ನು ಅವರು ಹೊರಡಿಸಿದ್ದಾರೆ.

ಇದು ಕೇವಲ ಒಂದು ಆಡಳಿತಾತ್ಮಕ ಸೂಚನೆಯಲ್ಲ, ಜನಪರ ಆಡಳಿತದ ಸ್ಪಷ್ಟ ಸಂದೇಶವಾಗಿದೆ.
ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ—ಮೂಲ ಗುರಿ.
ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ಜನಪ್ರತಿನಿಧಿಗಳ ಬಳಿ ಮೊರೆ ಹೋದಾಗ, ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವುದು ಅನಿವಾರ್ಯವಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಕೆಲ ಅಧಿಕಾರಿಗಳು ಕರೆ ಸ್ವೀಕರಿಸದೇ ಅಥವಾ ಬಳಿಕ ಮರು ಕರೆ ಮಾಡದೇ ಇರುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ.
ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಡಾ. ಶಾಲಿನಿ ರಜನೀಶ್. ಆಡಳಿತದ ಪ್ರತಿಯೊಂದು ಹಂತವೂ ಜನಸ್ಪಂದನಶೀಲವಾಗಿರಬೇಕು ಎಂಬ ತತ್ವದ ಆಧಾರದ ಮೇಲೆ ಸ್ಪಷ್ಟ ಮಾರ್ಗಸೂಚಿ ನೀಡಿದ್ದಾರೆ.

ಕರೆ ಸ್ವೀಕರಿಸಿ, ಸಾಧ್ಯವಾಗದಿದ್ದರೆ ಮರು ಕರೆ’—
ಸುತ್ತೋಲೆಯಲ್ಲಿ, ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು
ಕರೆ ಬಂದಾಗ ತಕ್ಷಣ ಸ್ವೀಕರಿಸಬೇಕು. ಅನಿವಾರ್ಯ ಕಾರಣಕ್ಕೆ ಸಾಧ್ಯವಾಗದಿದ್ದರೆ, ಕರ್ತವ್ಯ ಮುಗಿದ ತಕ್ಷಣ ಮರು ಕರೆ ಮಾಡಬೇಕು
ಸಮಸ್ಯೆಗಳ ಕುರಿತು ಗೌರವಪೂರ್ವಕವಾಗಿ ಸ್ಪಂದಿಸಬೇಕು ಎಂಬ ಅಂಶಗಳನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ.
ಈ ಸೂಚನೆಗಳನ್ನು ತಮ್ಮ ಆಪ್ತ ಶಾಖಾ ಸಿಬ್ಬಂದಿಗೂ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಿರುವುದು, ಆಡಳಿತದ ಪ್ರತಿಯೊಂದು ಹಂತದಲ್ಲೂ ಹೊಣೆಗಾರಿಕೆ ಬೇಕೆಂಬ ಅವರ ದೃಷ್ಟಿಕೋನವನ್ನು ತೋರಿಸುತ್ತದೆ.

