ಸಚಿವರು ಸಂವಿಧಾನ ಉಲ್ಲಂಘಿಸಿದ್ದರೆ ಕ್ರಮ ದಾಖಲೆ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು.
ಡಿಸಿ, ಪೊಲೀಸ್ ಮತ್ತು ಪಾಲಿಕೆ ಆಯುಕ್ತರೊಂದಿಗೂ ಚರ್ಚೆ ನಡೆಸಿದ ಗೌರ್ನರ.
ಪ್ರಕರಣ ತಿರುಚಲು ಜಾತಿ ಅಸ್ತ್ರಬಳಕೆ ಅಭಯ ಪಾಟೀಲ ನೇತೃತ್ವದ ನಿಯೋಗ ಭೆಟ್ಟಿ
ಬೆಳಗಾವಿ. ಬೆಳಗಾವಿ ಮಹಾನರ ಪಾಲಿಕೆ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗವು ರಾಜ್ಯಪಾಲರಿಗೆ ಗಂಭೀರ ಸ್ವರೂಪದ ಆರೋಪ ಹೊರೆಸಿ ಮೂರು ದೂರು ಸಲ್ಲಿಸಿತು. ಈ ದೂರನ್ನು ಗಂಭೀರವಾಗಿ ಆಲಿಸಿದ ರಾಜ್ಯಪಾಲರು ದಾಖಲೆ ಆಧರಿಸಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು,
ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವುದಾಗಿ ಸಚಿವರ ಹೇಳಿಕೆ, ಕೌನ್ಸಿಲ್ ಗೊತ್ತುವಳಿ ತಿದ್ದುಪಡಿ ಮಾಡಿದ್ದೂ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ನಿಯೋಗವು ರಾಜ್ಯಪಾಲರ ಗಮನ ಸೆಳೆಯಿತು.
ಸುಮಾರು 22 ನಿಮಿಷಗಳ ಕಾಲ ನಿಯೋಗ ಹೇಳಿದ್ದನ್ನು ಗಂಭೀರವಾಗಿ ಆಲಿಸಿದ ರಾಜ್ಯಪಾಲರು, ತಕ್ಷಣವೇ ಅಲ್ಲಿಯೇ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಪೊಲೀಸ್ ಕಮೀಶ್ನರ ಅವರನ್ನು ಕರೆದು ಚರ್ಚೆ ನಡೆಸಿದರು, ಸಚಿವ ಸತೀಶ ಜಾರಕಿಹೊಳಿಯವರು ಮೇಲಿಂದ ಮೇಲೆ ಪಾಲಿಕೆ ಸೂಪರ್ ಸೀಡ್ ಮಾಡುವುದಾಗಿ ಹೇಳಿಕೆ ನೀಡಿ ಮಹಿಳೆಯಾದ ನನಗೆನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಮೇಯರ್ ದೂರಿದರು.
ಇದನ್ನು ಗಂಭೀರವಾಗಿಯೇ ಅಲಿಸಿದ ರಾಜ್ಯಪಾಲರು, ಸಂವಿಧಾನದ ಪ್ರಕಾರ ಪ್ರಮಾಣ ವಚನ ಸ್ವೀಕರಿಸಿದ್ದಕ್ಕಿಂತ ವಿರೋಧವಾಗಿ ನಡೆದುಕೊಂಡಿದ್ದು ಕಂಡು ಬಂದರೆ ಅಂತಹವರ ವಿರುದ್ಧವೂ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು ಎಂದು ಗೊತ್ತಾಗಿದೆ, ಇನ್ನು ಪಾಲಿಕೆಯ ಆಯುಕ್ತರು ಕೌನ್ಸಿಲ್ ಗೊತ್ತುವಳಿ ತಿದ್ದುಪಡಿ ಮಾಡಿದ್ದರ ಬಗ್ಗೆ ದಾಖಲೆಗ:ಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ರಾಜ್ಯಪಾಲರು ಭರವಸೆ ನೀಡಿದರು,
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅನಿಲ ಬೆನಕೆ, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ. ಕಂದಾಯ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ,ಲೆಕ್ಕಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಪಾಟೀಲ ಸೇರಿದಂತೆ ಎಲ್ಲ ಬಿಜೆಪಿ ನಗರಸೇವಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಜಾತಿ ಬಣ್ಣ..! ‘ಪಾಲಿಕೆ ಆಯುಕ್ತರು `ಪರಿಶಿಷ್ಟ’ ಎನ್ನುವ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿ ಈ ಪ್ರಮಾದವನ್ನು ತಿರುಚುವ ಯತ್ನ ನಡೆದಿದೆ. ಇಲ್ಲಿ ಕಾಂಗ್ರೆಸ್ನವರು ವಿನಾಕಾರಣ ಜಾತಿ ವಿಷಯವನ್ನು ಎಳೆದು ತಂದು ಬೆಳಗಾವಿ ವಾತಾವರಣ ಕಲುಷಿತಗೊಳಿಸುತ್ತಿದ್ದಾರೆ.
ಹಾಗೆ ನೋಡಿದರೆ ಆಡಳಿತ ಗುಂಪಿನಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಏಳು ಜನ ಸದಸ್ಯರು ಇದ್ದಾರೆ, ಹೀಗಾಗಿ ಇದು ಯಾವುದೇ ಜಾತಿಗೆ ಸಂಬಧಿಸಿದ ಉದ್ದೇಶ ಇಲ್ಲ ಎಂದು ನಗರಸೇವಕ ಸಂದೀಪ ಜೀರಗ್ಯಾಳ ಹಾಗೂ ಇತರ ಆರು ಸದಸ್ಯರು ಸಲ್ಲಿಸಿದ ದೂರಿನಲ್ಲಿ ಹೇಳಿದ್ದಾರೆ.
ಕೊಲೆ ಬೆದರಿಕೆ- ಕ್ರಮಕ್ಕೆ ಮನವಿ
ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಎಂಇಎಸ್ ಮುಖಂಡ ರಮಾಕಾಂತ ಕೊಂಡೂಸ್ಕರ್ ಹಾಗೂ ಹಲವರು ಸೇರಿಕೊಂಡು ಬಿಜೆಪಿಯ ಕೆಲವು ನಗರಸೇವಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಗುರುವಾರ ರಾತ್ರಿ ನಗರಸೇವಕ ರಾಜು ಭಾತಖಾಂಡೆ ಹಾಗೂ ಇತರ ಸದಸ್ಯರ ಮನೆಗಳತ್ತ ನುಗ್ಗಿ ಮಾರಕಾಸ್ತ್ರ ಝಳಪಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿ 12 ಗಂಟೆಯಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಪೊಲೀಸರು ಸಚಿವರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಅನಿಲ ಬೆನಕೆ ದೂರಿದ್ದಾರೆ.
‘ಕಣ್ತಪ್ಪಿನಿಂದ ಆಗಿದ್ದಲ್ಲ…!
ಪಾಲಿಕೆಯ ಕೌನ್ಸಿಲ್ ಗೊತ್ತುವಳಿ ಕಡತ ತಿದ್ದುಪಡಿ ಕಣ್ತಪ್ಪಿನಿಂದ ಆಗಿದ್ದಲ್ಲ. ದುರುದ್ದೇಶದಿಂದ ಪಾಲಿಕೆ ಆಯುಕ್ತರು ಮಾಡಿದ್ದಾರೆಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ವಿಸರ್ಜನೆಗೆ ಬೇಕಾದ ಫೈಲ್ ಸಿದ್ಧಪಡಿಸುತ್ತಿದ್ದಾರೆ’ ಎಂದು ಶಾಸಕ ಅಭಯ ಪಾಟೀಲ ದೂರಿದರು. ಇನ್ನು ಕಡತ ಕಾಣೆಯಾಗಿದೆ ಎಂದು ಆಯುಕ್ತರು ದೂರು ನೀಡಿದ್ದಾರೆ. ಕಡತ ಕಾಣೆಯಾಗಿದ್ದರೆ ತಿದ್ದುಪಡಿ ಹೇಗಾಯಿತು? ಸರ್ಕಾರಕ್ಕೆ ಯಾವ ಕಡತ ಸಲ್ಲಿಕೆಯಾಯಿತು? ಯಾರು ಕಳಿಸಿದರು? ಇದರಲ್ಲಿ ಸಚಿವ ಸತೀಶ ಜಾರಕಿಹೊಳಿ ರಾಜಕೀಯ ಸ್ಪಷ್ಟವಾಗುತ್ತಿದೆ’ ಎಂದು ಅವರು ಹೇಳಿದರು