ಬೆಳಗಾವಿ
ಯಳ್ಳೂರು ಗ್ರಾಪಂನ ಪ್ರಸಕ್ತ ಸಾಲಿನಲ್ಲಿ 29 ಕಾಮಗಾರಿಯನ್ನು ಮಾಡದೆ ಸುಮಾರು 54 ಲಕ್ಷ 29 ಸಾವಿರ ರೂ. ಹಣವನ್ನು ಲೂಟಿ ಮಾಡಲು ಇಲ್ಲಿನ ಗ್ರಾಪಂ ಅಧ್ಯಕ್ಷೆ ಅಕ್ರಮವಾಗಿ ಠರಾವ್ ಪಾಸ್ ಮಾಡಿ ಆದೇಶ ಮಾಡಿರುವುದು ಸರಕಾರದ ಹಣ ಕೊಳ್ಳೆ ಹೊಡೆಯುವ ಯತ್ನ ಮಾಡಿದ್ದಾರೆ ಎಂದು ನ್ಯಾಯವಾದಿ ಸುರೇಂದ್ರ ಉಗಾರೆ ಆರೋಪಿಸಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊರೊನಾ ಸಂದರ್ಭದಲ್ಲಿ 29 ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಯಳ್ಳೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮಾಸೇಕರ ತನ್ನ ಪತಿಯ ಹೆಸರಿನಲ್ಲಿ ಗುತ್ತಿಗೆದಾರ ಎಂದು ನಮೂದು ಮಾಡಿ ಗ್ರಾಪಂ ಸಭೆಯಲ್ಲಿ ಠರಾವ್ ಪಾಸ್ ಮಾಡಿ ಸರಕಾರದ ಹಣ ಲಪಟಾಯಿಸುವ ಹುನ್ನಾರ ನಡೆಸಿರುವುದು ಇಲ್ಲಿನ ಕೆಲ ಗ್ರಾಪಂ ಸದಸ್ಯರು ಆರೋಪಿಸಿದ್ದರು ಎಂದರು.
ಯಳ್ಳೂರು ಗ್ರಾಪಂ ಅಧ್ಯಕ್ಷೆಗೆ ಪಿಡಿಒ ಪೂನಮ್ ಗಾಡಗೆ, ಕಾರ್ಯದರ್ಶಿ ಸದಾನಂದ ಮರಾಠೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ ಬುಚಡಿ, ತಾಪಂ ಅಧಿಕಾರಿ ಶ್ರೀಕಾಂತ್ ನಜರೆ, ನಾಗೇಶ ಹೂಗಾರ, ದುರುದುಂಡೇಶ್ವರ ಬನ್ನೂರ ನಕಲಿ ದಾಖಲೆ ಸೃಷ್ಟಿಸಲು ಗ್ರಾಪಂ ಅಧ್ಯಕ್ಷೆಗೆ ಸಹಾಯ ಮಾಡಿದ್ದಾರೆ. ಈ ಕುರಿತು ಜಿಪಂ ಸಿಇಒ ಅವರ ಗಮನಕ್ಕೂ ತರಲಾಗಿದೆ. ಈಗ ಗ್ರಾಪಂ ಸದಸ್ಯರು ಲೋಕಾಯುಕ್ತಕ್ಕೆ ದೂರು ಕೊಡಲು ಸಿದ್ಧತೆ ನಡೆಸಿದ್ದಾರೆ ಎಂದರು.
ಗ್ರಾಪಂ ಉಪಾಧ್ಯಕ್ಷ ಪ್ರಮೋದ ಪಾಟೀಲ್, ಸದಸ್ಯರಾದ ಸತೀಶ್ ಪಾಟೀಲ್, ಶಿವಾಜಿ ನಾಂದುರಕರ, ರಮೇಶ ಮೆಣಸೆ, ಪರಶುರಾಮ ಪರಿಠ, ಜ್ಯೋತಿಬಾ ಜೌಗುಲೆ, ಮನಿಶಾ ಗಾಡಿ, ಶಾಲನ್ ಪಾಟೀಲ್, ಸೋನಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.