ಬೆಳಗಾವಿಯಲ್ಲಿ “ಕುರ್ಚಿ” ಕುಸ್ತಿ..! ಇಲ್ಲಿ ವರ್ಗಾವಣೆ ಟ್ಯಾಕ್ಸ್ ಬಲು ದುಬಾರಿ

ತಾರಕ್ಕೇರಿದ ವರ್ಗಾವಣೆ ವಿಷಯ.

ಪತ್ರಗಳ ಮೇಲೆ ಶಿಫಾರಸ್ಸುಗಳು.ಅವರನ್ನು ಬಿಟ್ಟು ಇವರಿಗೆ ಕೊಡಿ .

ಇಬ್ಬರ‌ ಜಗಳದಲ್ಲಿ ಮೂರನೇಯವರ ಪ್ರವೇಶ

ಪಾಲಿಕೆಯಲ್ಲಿ ವರ್ಗಾವಣೆ ಕಥೆನೇ ರಣರೋಚಕ. ಇಲ್ಲಿ ವರ್ಗಾವಣೆಗೂ “ತೆರಿಗೆ”

ಬೆಳಗಾವಿ.

ಸರ್ಕಾರ ಬದಲಾದಂತೆಲ್ಲಾ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಸಹಜವಾಗಿ ನಡೆಯುತ್ತದೆ. ಆದರೆ ಜಿಲ್ಲೆಯಲ್ಲಿ ಒಬ್ಬರೇ ಸಚಿವರಿದ್ದರೆ ಅಧಿಕಾರಿಗಳ ವರ್ಗಾವಣೆ ಸುದ್ದಿನೇ ಅಲ್ಲ.

ಆದರೆ ಇಬ್ವರು ಪ್ರಭಾವಿ ಸಚಿವರಿದ್ದರೆ ಸಹಜವಾಗಿ ‘ಭಿನ್ನ’ ಅಭಿಪ್ರಾಯ ಬರುವುದು ಸಹಜ ಮತ್ತು ಸ್ವಾಭಾವಿಕ.

ಆದರೆ ವರ್ಗಾವಣೆಯಲ್ಲೂ ಸಿಕ್ಕಾಪಟ್ಟೆ ತೆರಿಗೆ ವಸೂಲಿ ಕೆಲಸ ಈಗ ಚರ್ಚೆಯ ಪ್ರಮುಖ ವಸ್ತು

ಈಗ ಬೆಳಗಾವಿಯಲ್ಲಿ ಅಧಿಕಾರಿಗಳ ವರ್ಗಾವಣೆ ಯಲ್ಲಿ ಜಿಲ್ಲೆಯ ಇಬ್ವರೂ ಸಚಿವರ ನಡುವೆ ಭಿನ್ನಾಭಿಪ್ರಾಯ ಇದೆಯೋ ಅಥವಾ ಇಲ್ಲವೊ ಗೊತ್ತಿಲ್ಲ.‌ಆದರೆ ಜಿಲ್ಲೆಯ ಎರಡು ಇಲಾಖೆಗಳಲ್ಲಿ ನಡೆದಿರುವ ಕುರ್ಚಿ ಕಿತ್ತಾಟ ನೋಡಿದರೆ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟ.

ಬೆಳಗಾವಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ನಡೆದಿರುವ ಕುರ್ಚಿ ಆಟ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲ.

ಬೆಳಗಾವಿ ಸಾರ್ವಜನಿಕ ಶಿಕಣ ಇಲಾಖೆಯ ಡಿಡಿಪಿಐ ಹುದ್ದೆಗೆ ಇಬ್ಬರ ನಡುವೆ ತಿಕ್ಕಾಟ ನಡೆದಿದೆ. ಸಚಿವರ ಶಿಫಾರಸ್ದಿನ‌ ಮೇರೆಗೆ ಸರ್ಕಾರ. ಎ.ಬಿ. ಪುಂಡಲಿಕ ಅವರನ್ನು ನೇಮಕ‌ ಮಾಡಿತ್ತು.‌ ಆದರೆ ಬಸವರಾಜ ನಾಲತವಾಡ ಅವರು ಕೋರ್ಟ ಮೆಟ್ಟಲೇರಿ‌ ಮತ್ತೇ ಬೆಳಗಾವಿಗೆ ಬಂದರು. ಈಗ ಮತ್ತೇ ಪುಂಡಲಿಕ ಅವರು ಸರ್ಕಾರದ ಮೊರೆ ಹೋಗಿದ್ದಾರೆ. ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಒಂದು ಕುರ್ಚಿ,.‌3 ಜನ‌ ಕುಸ್ತಿ

ಇನ್ನು ಪೊಲೀಸ್ ಇಲಾಖೆಯಲ್ಲಿ ಒಂದೇ ಸಿಪಿಐ ಹುದ್ದೆಗೆ ಮೂವರು ಕುಸ್ತಿ ನಡೆಸಿದ್ದಾರೆ.

ಮೂಲಗಳ ಪ್ರಕಾರ ಒಬ್ಬರು ಒಬ್ಬ‌ ಸಚಿವರ ಪತ್ರ ತೆಗೆದುಕೊಂಡು ಹೋಗಿ ಸರ್ಕಾರಕ್ಕೆ ಮುಟ್ಟಿಸಿದರೆ ಮತ್ತೊಬ್ಬರು ಮತ್ತೊಬ್ಬ ಸಚಿವರ ಪತ್ರವನ್ನು ತೆಗೆದುಕೊಂಡು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ‌

ಹೀಗಾಗಿ ಒಂದೇ ಕುರ್ಚಿಗೆ ಮೂವರು ಗಂಟು ಬಿದ್ದಿದ್ದಾರೆ.

ಅದಕ್ಕಿಂತ ಮೊದಲು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೇರೆ ರೀತಿಯ ರಾಜಕಾರಣ ನಡೆದಿದೆ. ಅದರ ಕಥೆಯೇ ರಣ ರೋಚಕ.

ಕಳೆದ ಸಾಮಾನ್ಯ ಸಭೆಯಲ್ಲಿ‌ ಅಧಿಕಾರಿಗಳ ವರ್ಗಾವಣೆ ಬಗ್ಗೆ ಚರ್ಚೆ ನಡೆಯಿತು. ಆದರೆ ನಂತರದ ಬೆಳವಣಿಗೆಯಲ್ಲಿ ಅದರಲ್ಲೂ ಕೆಲವರು ‘ತೆರಿಗೆ” ವಸೂಲಿಗೆ ನಿಂತರು ಎನ್ನುವ ಸುದ್ದಿ ಹಬ್ಬಿತು.

ಹೀಗಾಗಿ ಬಹುತೇಕ ನಗರ ಸೇವಕರು ಅಧಿಕಾರಿಗಳ ವರ್ಗಾವಣೆ ವಿಷಯವನ್ನು ಕೈಬಿಟ್ಟರು ಎಂದು ಗೊತ್ತಾಗಿದೆ. ಆದರೆ ಅಧಿಕಾರಿ ಮತ್ತು ಸಿಬ್ಬಂದಿಗಳ ಹತ್ತಿರ ತೆರಿಗೆ ವಸೂಲಿಗೆ ನಿಂತವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಾಗಿದ್ದರೂ ಯಾರೂ ಬಾಯಿ‌ ಬಿಡುತ್ತಿಲ್ಲ. ಆದರೆ ತೆರಿಗೆ ವಸೂಲಿಗಾರರು ಯಾರು ಎನ್ನುವುದು ಪಾಲಿಕೆಯಲ್ಲಿ ಅಷ್ಟೇ ಏಕೆ ಬೆಳಗಾವಿಯಲ್ಲಿ ಕೂಡ ಜಗಜ್ಜಾಹೀರವಾಗಿದೆ.

ಅದನ್ನು ಬಿಡಿ. ಬೆಳಗಾವಿ ಪೊಲೀಸ್ ಇಲಾಖೆಯ ಸಿಇಎನ್ ದಲ್ಲಿ ಸಿಪಿಐ ಕುರ್ಚಿಗೆ ಅಂತರಂಗದಲ್ಲಿ ಜಂಗೀ ಕುಸ್ತಿನೇ ಏರ್ಪಟ್ಟಿದೆ.

ಈಗ ಆ ಹುದ್ದೆಯಲ್ಲಿ ಸಂಜೀವ ಕಾಂಬಳೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.‌ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ ಅದೇ ಸ್ಥಳದಲ್ಲಿ‌ ಮುಂದುವರಿಕೆಗೆ ಪತ್ರ ನೀಡಿದ್ದರು. ನಂತರ ಸಿಪಿಐ ಜಾವೇದ್ ಮುಶಾಪುರೆ ಅವರಿಗೂ ಸಚಿವರು ಪತ್ರ ನೀಡಿದರು. ಹೀಗೆ ಇವರಿಬ್ಬರ‌ ನಡುವೆ ಪತ್ರದ ಸಮರ ನಡೆದಿತ್ತು. ಹಾಗೇ ನೋಡಿದರೆ ಇವರಿಬ್ಬರೂ ಗಳಸ್ಯ ಕಂಠಸ್ಯ. ಏಕವಚನದಲ್ಲಿ ಮಾತಾಡುವಷ್ಟು ಆತ್ಮೀಯರು.

ಇಇದೆಲ್ಲವೂ ಒಂದು ಹಂತಕ್ಕೆ ನಡೆದಿರುವಾಗಲೇ ಅವಟಿ ಎಂಬುವರು ಅದೇ ಪೋಸ್ಟ್ ಗೆ ಕಸರತ್ತು ನಡೆಸಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.. ಅವರಿಗೆ ಯಾವ ಸಚಿವರು ಪತ್ರ ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಿಲ್ಲ.ಅದೇನೇ ಆಗಲಿ ಒಂದು ಸಿಪಿಐ ಹುದ್ದೆಗೆ ಈ ರೀತಿ ಕುಸ್ತಿ ನಡೆದಿರಬೇಕಾದರೆ ಇನ್ನುಳಿದ ಹುದ್ದೆಗಳ ಗತಿ ಏನು ಎನ್ಬುವುದರ ಬಗ್ಗೆ ನೀವೇ ಆಲೋಚಿಸಿ.

0

Leave a Reply

Your email address will not be published. Required fields are marked *

error: Content is protected !!