ಸತೀಶ ಜಾರಕಿಹೊಳಿ ಶಿಫಾರಸ್ಸು ಮಾಡಿದ ವರ್ಗಾವಣೆ ಪತ್ರಕ್ಕೆ ಕಿಮ್ಮತ್ತೇ ಇಲ್ಲದಂತಾಯಿತಾ?.
ಪಾಲಿಕೆ, ಕಂದಾಯ, ಪೊಲೀಸ್ ಮತ್ತು ಸಬ್ ರಿಜಿಸ್ಟ್ರಾರ್ ದಲ್ಲಿ ಯಾರದ್ದಿದೆ ಹಸ್ತಕ್ಷೇಪ?
ತರಕಾರಿ ಹರಾಜಿನಂತಾದ ಅಧಿಕಾರಿಗಳ ವರ್ಗಾವಣೆ ದಂಧೆ.
. ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಡುವಿನ ರಾಜಕೀಯ ಕದನಕ್ಕೆ ಕನಕಪುರದ ಬಂಡೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಂಟ್ರಿ ಆಗಿದ್ದು ಒಂದು ರೀತಿಯಲ್ಲಿ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದಂತಾಗಿದೆ.
ಸುಮಾರು ಹತ್ತು ವರ್ಷದ ಹಿಂದೆ ಬೆಳಗಾವಿ ತಾಲುಕಿನ PLD ಬ್ಯಾಂಕಿನ ಚುನಾವಣೆ ಸಂದರ್ಭದಲ್ಲಿಯೇ ಸತೀಶ ವರ್ಸಿಸ್ ಹೆಬ್ಬಾಳಕರ ನಡುವೆ ಭಾರೀ ಕದನ ನಡೆದಿತ್ತು, ಆಗ ಹೆಬ್ಬಾಳಕರ ಅವರು ಬೆಳಗಾವಿ ಹಳೆ ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ತಹಶೀಲ್ದಾರ ಕಚೇರಿ ಮುಂದೆ ಧರಣಿ ನಡೆಸಿದ್ದರು,
ಒಂದು ರೀತಿಯಲ್ಲಿ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿತ್ತು, ನಂತರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಬ್ಬಿನ ಬಿಲ್ಲಿಗೆ ಸಂಬಂಧಿಸಿದಂತೆ ರೈತರ ಪ್ರತಿಭಟನೆ ಜೋರಾಗಿತ್ತು, ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ ಮಧ್ಯ ಪ್ರವೇಶ ಮಾಡಿದ್ದರು. , ಇದಕ್ಕೆ ಜಾರಕಿಹೊಳಿ ಸಹೋದರರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು,
ನಂತರ ಈ ಕದನದಲ್ಲಿ ಒಂದು ರೀತಿಯ ಮ್ಯಾಚ್ ಫಿಕ್ಸಿಂಗ್ ಆಯಿತು, ಇದರ ನಂತರ ಸತೀಶ್ ಜಾರಕಿಹೊಳಿ ಸ್ವಲ್ಪ ಮಟ್ಟಿಗೆ ಸೈಲೆಂಟ್ ಆದರೆ, ಕಾಂಗ್ರೆಸ್ನಲ್ಲಿಯೇ ಇದ್ದ ರಮೇಶ ಜಾರಕಿಹೊಳಿ ಹೆಬ್ಬಾಳಕರ ಮತ್ತು ಡಿಕೆಶಿ ವಿರುದ್ಧ ದೊಡ್ಡ ಸಮರವನ್ನೇ ಸಾರಿದರು.
ಈ ಮುನಿಸಿನಿಂದ ಕಾಂಗ್ರೆಸ್ನ ಯಾವೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲೇ ಇಲ್ಲ. ಇದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.
ಸತೀಶ ಮುನಿಸು ಏಕೆ ? ಹಾಗೇ ನೋಡಿದರೆ ಸತೀಶ ಜಾರಕಿಹೊಳಿ ವರ್ಗಾವಣೆ ವಿಷಯದಲ್ಲಿ ತಮ್ಮ ಮಾತು ನಡೆಯುತ್ತಿಲ್ಲ ಎನ್ನುವುದಕ್ಕೆ ಬೇಸರ ಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿಯವರು ಕೊಟ್ಟ ವರ್ಗಾವಣೆ ಪತ್ರಕ್ಕೆ ಮಾನ್ಯತೆ ಸಿಗುತ್ತಿಲ್ಲ. ಇಲ್ಲಿ ಹೆಬ್ಬಾಳಕರ ಮೂಲಕ ಡಿಕೆಶಿ ಹಸ್ತಕ್ಷೇಪ ಜೋರಾಗಿ ನಡೆದಿದೆ ಎನ್ನುವುದು ಗೊತ್ತಾಗಿದೆ. ಈ ಅಸಮಾಧಾನ ಸತೀಶ ಜಾರಕಿಹೊಳಿಯವರಲ್ಲಿದೆ.
ಉದಾಹರಣೆ ಸಮೇತ ಹೇಳಬೇಕೆಂದರೆ, ಬೆಳಗಾವಿ ಮಹಾನಗರ ಪಾಲಿಕೆಯ ಅಧೀನ ಅಧಿಕಾರಿಯೊಬ್ಬರ ವರ್ಗಾವಣೆಗೆ ಸತೀಶ ಜಾರಕಿಹೊಳಿ ಶಿಫಾರಸ್ಸು ಪತ್ರ ಕೊಟ್ಟಿದ್ದರು. ನಂತರ ಸ್ವತ: ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಸಹ ಶಿಫಾರಸ್ಸು ಮಾಡಿ ‘ಅಸ್ತು’ ಎಂದಿದ್ದರು. ಆದರೆ ಇವರಿಬ್ಬರ ಪತ್ರಕ್ಕೆ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ ಕ್ಯಾರೆ ಎನ್ನಲಿಲ್ಲವಂತೆ. ಹೀಗಾಗಿ ಸಿಎಂ ಗಿಂತ ಯುಡಿ ಮಿನಿಸ್ಟರ್ ಪವರ್ ಫುಲ್ ಆದರಾ ಎನ್ನುವ ಮಾತನ್ನು ಖುದ್ದು ಕೆಲವರು ಆಡತೊಡಗಿದರು.
ಇಲ್ಲಿ ಇದೊಂದೇ ಅಲ್ಲ ಇನ್ನೂ ಪೊಲೀಸ್ ಸೇರಿದಂತೆ ಸಬ್ ರಿಜಿಸ್ಟರ್, ಕಂದಾಯ ಇಲಾಖೆಯಲ್ಲಿಯೂ ಕೂಡ ಇಬ್ಬರೂ ಸಚಿವರ ನಡುವೆ ತಿಕ್ಕಾಟ ನಡೆದಿದೆ, ಇದರಲ್ಲಿ ಸಚಿವೆ ಹೆಬ್ಬಾಳಕರ ಪರವಾಗಿ ಡಿ,ಕೆ ಶಿವಕುಮಾರ ಇದನ್ನೆಲ್ಲ ಮಾಡುತ್ತಿದಾರೆ ಎನ್ನುವ ಅಸಮಾಧಾನ ಸತೀಶ ಜಾರಕಿಹೊಳಿಯಲ್ಲಿದೆ.