ಗೊಂದಲ ಗೂಡಾದ ಪಾಲಿಕೆ ಸಭೆ. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿಂದ ಧರಣಿ ಬೆದರಿಕೆ. ಮೇಯರ ಅನುದಾನ ದುರ್ಬಳಕೆ ಆರೋಪ. ಒಂದುವರೆ ಕೋಟಿ ರೂ ಕಾಮಗಾರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು. 138 pk ನೇಮಕ ಮತ್ತೇ ಸದ್ದು. ಬಾಕಿ ಸಂಬಳ ಪಾವತಿ ಯಾವಾಗ?. ನಗರಸೇವಕರಿಗೆ ಸಭೆಯಲ್ಲಿ ಬುದ್ದಿ ಮಾತು ಹೇಳಿದ ಅಭಿಯಂತೆ ನಿಪ್ಪಾಣಿಕರ
ಬೆಳಗಾವಿ. .ಮಹಾನಗರದ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಅಕ್ಷರಶಃ ದಾರಿ ತಪ್ಪಿದ ಮಗನಂತಾಗಿತ್ತು.
ಯಾರು ಆಡಳಿತ ಮತ್ತು ವಿರೋಧ ಪಕ್ಷ ಎನ್ನುವುದೇ ಗೊತ್ತಾಗದಂತೆ ಬರೀ ವಾಗ್ವಾದದಲ್ಲಿಯೇ ಸಭೆ ಅಂತ್ಯ ಕಂಡಿತು.
ಮಧ್ಯಾಹ್ನದವರೆಗೆ ನಡೆದ ಸಭೆಯ ಒಟ್ಟಾರೆ ಚಿತ್ರಣವನ್ನು ಗಮನಿಸಿದರೆ, ಆಡಳಿತ ಮತ್ತು ವಿರೋಧ ಪಕ್ಷದಲ್ಲಿ “ನೀ ಅತ್ತಂಗ ಮಾಡು..ನಾ ಕರೆದಂಗ್ ಮಾಡ್ತೆನಿ’ ಎನ್ನುವ ಹಾಗಾಗಿತ್ತು.

ಹೀಗಾಗಿ ಪಾಲಿಕೆ ಸಭೆ ಒಂದು ರೀತಿಯಲ್ಲಿ ಮಕ್ಕಳ ಸಂತೆ ತರಹ ಆಗಿತ್ತು.
ಮಹಾನಗರ ಪಾಲಿಕೆಯಲ್ಲಿನ 138. ಪೌರ ಕಾರ್ಮಿಕರ ನೇಮಕಾತಿ ವಿವಾದ, ಅವರ ಬಾಕಿ ಸಂಬಳ ಮತ್ತು ಲೋಕಾಯುಕ್ತರು ನೀಡಿದ ದೂರಿನ ಬಗ್ಗೆ ಎಂಎನ್ಎಸ್ ಸದಸ್ಯ ರವಿ ಸಾಳುಂಕೆ ಪ್ರಶ್ನೆ ಮಾಡಿದರು.

ಅಷ್ಟೇ ಅಲ್ಲ ಪೌರ ಕಾರ್ಮಿಕರ ಬಾಕಿ ಸಂಬಳ ಸೇರಿದಂತೆ ಆಯುಕ್ತರು ಹಿಂದೆ ಪರಿಷತ್ ಸಭೆಯಲ್ಲಿ ಮಾತನಾಡಿದ್ದರ ಬಗ್ಗೆ ಉಲ್ಲೇಖ ಮಾಡಿ ಸಾಳುಂಕೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಯಾವೊಬ್ಬ ಸದಸ್ಯರೂ ಕೂಡ 138 ಪಿಕೆ ನೇಮಕ ಸಮರ್ಥಿಸಿ ಕೊಳ್ಳುವ ಗೋಜಿಗೆ ಹೋಗಲಿಲ್ಲ.
ಇದರ ಜೊತೆಗೆ ಮೇಯರ್ ಮತ್ತು ಉಪ ಮೇಯರ್ ಅವರು ಒಂದುವರೆ ಕೋಟಿ ರೂ.ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದರ ಬಗ್ಗೆ ಕಾವೇರಿದ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು.

ಮತ್ತೊಂದು ಗಮನಿಸಬೇಕಾದ ಸಂಗತಿ ಎಂದರೆ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪಾಲಿಕೆ ಎದುರು ಆಮರಣ ಉಪವಾಸ ಮಾಡುವ ಬೆದರಿಕೆ ಹಾಕಿದರು.
ಪಾಲಿಕೆ ಆಡಳಿತ ಮಂಡಳಿ ಅಸ್ತಿತ್ವ ದಲ್ಲಿ ಇರದೇ ಇದ್ದಾಗಿನ ವಿಷಯವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ಸದಸ್ಯರು ಬಹಳ ಹೊತ್ತು ವಾದ ಮಾಡಿದರು.
ಇದಕ್ಕೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರು, ಅಧಿಕಾರಿಗಳು ಸ್ಪಷ್ಟನೆ ನೀಡಿದರೂ ಕೂಡ ಸರಿಯಾಗಿ ಅರ್ಥೈಸಿಕೊಳ್ಳದ ವಿರೋಧ ಪಕ್ಷದ ಕೆಲವರು ವಾಗ್ವಾದ ನಡೆಸಿದ್ದು ಗೊಂದಲ ಸೃಷ್ಟಿಸಿತು.
ಒಂದು ಹಂತದಲ್ಲಿ ಪಾಲಿಕೆಯ ಮಾಜಿ ಪರಿಷತ್ ಕಾರ್ಯದರ್ಶಿಯೂ ಆದ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಅವರಿಂದ ನಗರಸೇವಕರು ಬುದ್ದಿ ಮಾತು ಹೇಳಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿತು.
ಯಾವುದು ಮುಖ್ಯ..!?

ಮೇಯರ್ ಅವರು ಈ ಅನುದಾನವನ್ನು ಕಮಾನ್ ಮತ್ತು ಸಮುದಾಯ ಭವನಕ್ಕೆ ನೀಡಿದ್ದರ ಬಗ್ಗೆ ವಿರೋಧ ಪಕ್ಷದವರ ಅಸಮಾಧಾನಕ್ಕೆ ಕಾರಣವಾಯಿತು.
ಮೇಯರ್ ಅವರು ಕೇವಲ 37. ನಗರಸೇವಕರಿಗೆ ಮೇಯರ್ ಅಲ್ಲ. ಆದರೆ ಅವರು ತುರ್ತು ಕಾಮಗಾರಿಗೆ ಮೀಸಲಿಟ್ಟ ಅನುದಾನ ಬಳಕೆ ಮಾಡುವಾಗ ಚಿಂತನೆ ಮಾಡಬೇಕಿತ್ತು. ಹೀಗಾಗಿ ಒಂದುವರೆ ಕೋಟಿ ಅನುದಾನದಲ್ಲಿ ದುರ್ಬಳಕೆ ಆಗಿದೆ ಎಂದು ದೂರಿದರು.
ನಾಲಾ ದುರಸ್ತಿ ಮತ್ತು ಸ್ವಚ್ಚತೆ ಸಂಬಂಧ ಬಿಜೆಪಿ ನಗರಸೇವಕ ಗಿರೀಶ ಧೋಂಗಡಿ ಅವರು 7 ದಿನಗಳ ಗಡುವು ನೀಡಿದರು. ನಂತರ ಪಾಲಿಕೆ ಎದುರು ಆಮರಣ ಉಪವಾಸ ಮಾಡುವ ಬೆದರಿಕೆ ಒಡ್ಡಿದರು. ಮತ್ತೊಂದು ಕಡೆಗೆ ವಿರೋಧ ಪಕ್ಷದ ಸದಸ್ಯರೊಬ್ಬರು ಚರಂಡಿ, ರಸ್ತೆ ರಿಪೇರಿ ಗೆ ಸಂಬಂಧ ಪಾಲಿಕೆ ಮುಂದೆ ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದರು.