ಜೊಲ್ಲೆಗೆ 3K ಸಂಕಷ್ಟ?

ಚಿಕ್ಕೋಡಿ: ಚುನಾವಣಾ ಪ್ರಚಾರದಿಂದ 3 ಕೆ ದೂರ…
ರಾಜ್ಯದಲ್ಲಿ ಜಂಟಿ. ಚಿಕ್ಕೋಡಿಯಲ್ಲಿ ಜೊಲ್ಲೆ ಒಂಟಿ!

ಚಿಕ್ಕೋಡಿ:

ರಾಜ್ಯದ ಎಲ್ಲೆಡೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸ್ಪರ್ಧೆಗೆ ಇಳಿದಿದೆ. ಆದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿನ ಚಿತ್ರಣ ಮಾತ್ರ ಬೇರೆಯದೇ ಆಗಿದೆ. ಇಲ್ಲಿ ಜೊಲ್ಲೆ ಕುಟುಂಬವನ್ನು ಸ್ವಪಕ್ಷೀಯರೇ ಒಂಟಿ ಮಾಡಿರುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಹೌದು,

ಚಿಕ್ಕೋಡಿ ಚುನಾವಣಾ ಪ್ರಚಾರದಿಂದ 3K ಗಳು ಅಂತರ ಕಾಯ್ದುಕೊಂಡಿರುವುದು ಕಂಡುಬರುತ್ತಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಭಾರತೀಯ ಜನತಾ ಪಕ್ಷದಿಂದ ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆಯವರು ಕಣಕ್ಕೆ ಇಳಿದಿದ್ದಾರೆ
.


ಕಾಂಗ್ರೆಸ್ನಿಂದ ಜಾರಕಿಹೊಳಿ ಕುಟುಂಬದ ಕುಡಿ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಬಾರಿ ಸ್ಫರ್ಧೆಗೆ ಇಳಿದಿದ್ದು ,ಪ್ರಭಲ ಪೈಪೋಟಿ ನೀಡುತ್ತಿದ್ದಾರೆ.. ಇನ್ನುಳಿದಂತೆ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಅವರು ಕಣದಲ್ಲಿದ್ದು, ಅಹಿಂದ ಮತಗಳ ಮೇಲೆ ಕಣ್ಣಿರಿಸಿದ್ದಾರೆ ಎನ್ನಲಾಗುತ್ತಿದೆ.


ಅವರೇ ಈ 3K
ಅಂದ ಹಾಗೆ ಈ 3 ಕೆ ಬೇರ್ಯಾರೂ ಅಲ್ಲ. ಕೆಎಲ್ಇ ಕಾರ್ತಾಧ್ಯಕ್ಷರೂ ಆಗಿರುವ ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಮಾಜಿ ಸಂಸದ ರಮೇಶ ಕತ್ತಿ.

ಚಿಕ್ಕೋಡಿ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಈ ಮೂವರೂ ಸದ್ಯ ಈ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದು, ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಪ್ರಚಾರದಲ್ಲಿ ಸಕ್ರಿಯವಾಗಿರುವುದು ಕಂಡು ಬರುತ್ತಿದೆ.
ಒಂದು ಮೂಲದ ಪ್ರಕಾರ ಚಿಕ್ಕೋಡಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಮತ್ತು ಅವರ ಕುಟುಂಬ ಈ 3Kಯನ್ನು ನಡೆಸಿಕೊಂಡಿರುವ ರೀತಿಯೇ ಅವರ ಮುನಿಸಿಗೆ ಕಾರಣವಾಗಿದೆ.

ಬಿಜೆಪಿ ಸಕ್ರಿಯ ನಾಯಕರಾದ ಈ ಮೂವರೂ ಟಿಕೇಟು ಆಕಾಂಕ್ಷಿಗಳಾಗಿದ್ದು, ಡಾ. ಕೋರೆ ಅವರು ತಮ್ಮ ಪುತ್ರ ಅಮೀತ ಕೋರೆಗೆ ಟಿಕೇಟು ಕೊಡಿಸುವ ನಿಟ್ಟಿನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರು.

ಬೆಳಗಾವಿ ಟಿಕೇಟಿಗೆ ಮಹಾಂತೇಶ ಕವಟಗಿಮಠ ಅವರು ಶ್ರಮಪಟ್ಟಿದ್ದರು. ಕೊನೇಕ್ಷಣದಲ್ಲಿ ಶೆಟ್ಟರ್ ಘರ್ ವಾಪ್ಸಿಯಿಂದ ಕವಟಗಿಮಠ ಅವರ ಟಿಕೇಟು ತಪ್ಪಿತ್ತು.

ಇನ್ನು ಮಾಜಿ ಸಂಸದ, ಚಿಕ್ಕೊಡಿ ಟಿಕೇಟ್ ನ ಪ್ರಭಲ ಆಕಾಂಕ್ಷಿಯಾಗಿದ್ದ ರಮೇಶ ಕತ್ತಿಯವರಿಗೂ ಟಿಕೇಟು ಕೈ ತಪ್ಪಿದ್ದು ನೋವನ್ನುಂಟುಮಾಡಿದೆ.

ಇನ್ನು ಜೊಲ್ಲೆಯವರಿಗೆ ಟಿಕೇಟು ಘೋಷಣೆಯಾದ ನಂತರವೂ ಕೂಡಾ ಅವರು, ಈ 3K ಯನ್ನು ವಿಶ್ವಾಸಕ್ಕೆ ಪಡೆಯುವ ಕೆಲಸವನ್ನು ಮಾಡಲೇ ಇಲ್ಲ. ಹಾಗಾಗಿಯೇ ತಮ್ಮ ವಶೀಲಿಯಿಂದ ಲೋಕಸಭಾ ಟಿಕೇಟು ಗಿಟ್ಟಿಸಿಕೊಂಡಿದ್ದರೂ ಕೂಡಾ ಈಗ ಅಣ್ಣಾನಿಗೆ ಸ್ವಪಕ್ಷೀಯರೇ ಕೈಕೊಡುತ್ತಿರುವ ಲಕ್ಷಣ ಕಾಣಿಸಿಕೊಳ್ಳುತ್ತಿದೆ, ಪತ್ನಿ ಶಶಿಕಲಾ ಜೊಲ್ಲೆ ಮತ್ತು ಪುತ್ರ ಬಸವಪ್ರಸಾದ ಜೊಲ್ಲೆಯವರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಉಳಿದಂತೆ ಮಾಜಿ ಶಾಸಕ ಮಹೇಶ ಕುಮಟಳ್ಳಿಯವರು ನಿನ್ನೆ ನಾಮ್ ಕೇ ವಾಸ್ತೆ ಪ್ರಚಾರಕ್ಕೆ ತೆರಳಿದ ಬಗ್ಗೆಯೂ ತಿಳಿದುಬಂದಿದೆ.


ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಕ್ರಿಯಾಶೀಲರಾಗಿದ್ದು, ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಚಿಕ್ಕೋಡಿ ಹತ್ತಿರವೂ ಸುಳಿಯುತ್ತಿಲ್ಲ. ಇನ್ನು ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ತಮ್ಮ ಬೆಂಬಲ ಪುತ್ರಿ ಪ್ರಿಯಾಂಕಗೆ ಇರುವುದಾಗಿ ನೇರಾ ನೇರ ಹೇಳಿಕೊಂಡಿದ್ದು, ಅವರ ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ.

ಇನ್ನು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ ಜಾರಕಿಹೊಳಿ ಅವರು ವಾರದಲ್ಲಿ 2 ದಿನ ಪುತ್ರಿ ಪ್ರಿಯಾಂಕ ಪರ ಪ್ರಚಾರದಲ್ಲಿ ತೊಡಗಿದ್ದು, ಅಹಿಂದ ಮತಗಳನ್ನು ಒಂದು ಕಡೆ ಸೇರಿಸುವ ಪ್ರಯತ್ನದಲ್ಲಿದ್ದಾರೆ. ಒಂದು ಮೂಲದ ಪ್ರಕಾರ ಚಿಕ್ಕೋಡಿ, ಅಥಣಿ, ನಿಪ್ಪಾಣಿ ಮತ್ತು ಕಾಗವಾಡ ಕ್ಷೇತ್ರದಲ್ಲಿ ಭಾರೀ ಪ್ರಭಾವ ಹೊಂದಿರುವ ಜಾರಕಿಹೊಳಿ ಸಹೋದರರು ಪುತ್ರಿ ಪ್ರಿಯಾಂಕ ಪರ ಬ್ಯಾಟಿಂಗ್ ಮಾಡುತ್ತಿರುವುದು ಈಗ ಗುಟ್ಟೇನಲ್ಲ!

ಇದೆಲ್ಲದರ ನಡುವೆ ಹಾಲಿ ಸಂಸದರಾಗಿರುವ ಅಣ್ಣಾ ಸಾಹೇಬ ಜೊಲ್ಲೆಯವರು ಕೇಂದ್ರದಿಂದ ತಂದ ಬಹುಪಾಲು ಅನುದಾನವನ್ನು ತಮ್ಮ ಪತ್ನಿಯ ಮತಕ್ಷೇತ್ರ ನಿಪ್ಪಾಣಿಗೆ ಬಳಕೆ ಮಾಡಿರುವುದು ಕೂಡಾ ಮತದಾರರಲ್ಲಿ ಅಸಮಾಧಾನವನ್ನು ಹುಟ್ಟು ಹಾಕಿದೆ. ಲೋಕಸಭಾ ಕ್ಷೇತ್ರದಡಿ 8 ಮತಕ್ಷೇತ್ರಗಳು ಇದ್ದರೂ ಕೂಡಾ ಅನುದಾನವನ್ನು ಕೇವಲ ಒಂದೇ ಕ್ಷೇತ್ರಕ್ಕೆ ಬಳಕೆ ಮಾಡಿರುವುದು ಈ ಅಸಮಾಧಾನಕ್ಕೆ ಮೂಲ ಕಾರಣ ಎನ್ನಲಾಗುತ್ತಿದ್ದರೂ ಕ್ಷೇತ್ರದ ಜನರನ್ನು ಅಣ್ಣಾ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಕೂಡಾ ಕೇಳಿ ಬರುತ್ತಿವೆ. ಕೇವಲ ಮೋದಿ ಹವಾದಲ್ಲಿ ಈ ಬಾರಿಯೂ ಗೆಲ್ಲುವ ಭರವಸೆ ಹೊಂದಿರುವ ಅಣ್ಣಾ ಸಾಹೇಬರಿಗೆ ಮತದಾರ ಮಹಾಪ್ರಭು ಯಾವ ತೀಪರ್ು ನೀಡುತ್ತಾನೆ ಎಂಬುದನ್ನು ಕಾದು ನೋಡಬೇಕು.

:ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಜಾತಿವಾರು ಲೆಕ್ಕಾಚಾರ
ಚಿಕ್ಕೋಡಿ ಲೋಕಸಭೆ ವ್ಯಾಪ್ತಿ ಒಟ್ಟು 17,41,758 ಮತದಾರರಿದ್ದು, ಅದರಲ್ಲಿ ಪುರುಷರು 8,75,953 ಮತದಾರರು ಇದ್ದರೆ 8,65,731 ಮಹಿಳಾ ಮತದಾರರು ಹೊಂದಿದ್ದಾರೆ ಜೊತೆಗೆ 74 ಇತರ ಮತದಾರರು ಇದ್ದಾರೆ. ಜಾತಿವಾರು ಲೆಕ್ಕಾಚಾರ ಪ್ರಕಾರ, ಲಿಂಗಾ0ುತ: 4,10,000, ಕುರುಬ: 1,70,000, ಎಸ್ ಸಿ: 1,65,000, ಎಸ್ ಟಿ : 90,000, ಮುಸ್ಲಿಂ: 1,80,000, ಜೈನ್: 1,30,000, ಮರಾಠ: 1,70,000, ಇತರ ಮತದಾರರು: 2,55,000 ಜನರಿದ್ದಾರೆ. ಇಲ್ಲಿ ಲಿಂಗಾಯಿತ ಮತದಾರರರೇ ನಿರ್ಣಾಯಕ ರಾಗಲಿದ್ದಾರೆ.

ಆದರೆ ಗಮನಿಸಬೇಕಾದ ಅಂಶ ಎಂದರೆ ಇಲ್ಲಿ ಅಹಿಂದ ಒಂದಾದರೆ ಲಿಂಗಾಯತ ಅಭ್ಯರ್ಥಿ ಗೆ ಪೆಟ್ಟು ಬೀಳುವುದು ಶತ:ಸಿದ್ಧ.

+1

Leave a Reply

Your email address will not be published. Required fields are marked *

error: Content is protected !!