ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ ?! ` ಮಧ್ಯಂತರ ಚುನಾವಣೆ ಬರಬಹುದು ಸಿದ್ಧವಾಗಿರಿ ‘ ಹೊಸದೆಹಲಿ.
ಇದು ಬಿಜೆಪಿ ರಾಷ್ಟ್ರೀಯ ನಾಯಕತ್ವ ಕರ್ನಾಟಕದ ಘಟಕಕ್ಕೆ ನೀಡಿರುವ ಸೂಚನೆ. ಈ ಸೂಚನೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ರಾಜ್ಯ ಘಟಕ ಚುರುಕಾಗಿದ್ದು ಅಗತ್ಯ ಕಾರ್ಯ ತಂತ್ರ ರೂಪಿಸಲು ಸಜ್ಜಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ನಡೆಸಿದ ಪಾದಯಾತ್ರೆ ಹಾಗೂ ಮೈಸೂರಿನಲ್ಲಿ ಭಾನುವಾರ ನಡೆದ ಬೃಹತ್ ಸಮಾವೇಶದ ಯಶಸ್ಸಿನ ನಂತರ ಇದೀಗ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಹಗರಣದ ವಿರುದ್ಧ ಬಳ್ಳಾರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಬೃಹತ್ ಪ್ರತಿಭಟನಾ ಸಭೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು ಸದ್ಯದಲ್ಲೇ ದಿನಾಂಕ ಘೋಷಣೆ ಆಗಲಿದೆ.
ಮೈಸೂರಿನ ಮೂಡಾ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಿಸಿಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕೋರಿ ವಕೀಲ ಟಿ.ಜೆ ಅಬ್ರಹಂ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯಪಾಲರು ಬಹುತೇಕ ಇನ್ನೆರಡು- ಮೂರು ದಿನಗಳಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ರಾಜ್ಯಪಾಲರೇನಾದರೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇ ಆದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಮೇಲೆ ಪಕ್ಷದ ಒಳಗೆ ಮತ್ತು ಹೊರಗೆ ಒತ್ತಡ ಹೆಚ್ಚಾಗಲಿದೆ. ಆದರೆ ಕಾನೂನು ಹೋರಾಟ ನಡೆಸಲು ನಿರ್ಧರಿಸಿರುವ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂಬುದು ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಗೊತ್ತಾಗುವ ಅಂಶ. ಮೈಸೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್ ನ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ವ್ಯಕ್ತಪಡಿಸಿರುವ ಆಕ್ರೋಶ ಗಮನಿಸಿದರೆ ಪಕ್ಷದೊಳಗೇ ಇದ್ದು ತಮ್ಮ ವಿರುದ್ಧ ಚಟುವಟಿಕೆ ನಡೆಸುತ್ತಿರುವ ಮುಖಂಡರನ್ನೂ ಗುರಿಯಾಗಿಸಿಕೊಂಡಿರುವುದು ಗೊತ್ತಾಗುತ್ತದೆ.
ಅಹಿಂದ ವರ್ಗಗಳ ನಾಯಕ ಎಂಬ ಕಾರಣಕ್ಕೆ ತನ್ನನ್ನು ಅದಿಕಾರದಿಂದ ಕೆಳಗಿಳಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಪ್ರತಿಪಾದಿಸಿರುವ ಸಿದ್ದರಾಮಯ್ಯ ಈ ಹಿಂದೆ ಹಿಂದುಳಿದ ವರ್ಗದ ದಿವಂಗತ ದೇವರಾಜ ಅರಸು, ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಅವರ ವಿರುದ್ಧ ಪಿತೂರಿ ನಡೆಸಿ ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸ್ವ ಪಕ್ಷೀಯರನ್ನೇ ಗುರಿಯಾಗಿಸಿಕೊಂಡು ಹೇಳಿರುವ ಮಾತುಗಳು ಎನ್ನಲಾಗುತ್ತಿದೆ. ಈ ಮೂಲಕ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಅಹಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹುಯಿಲೆಬ್ಬಿಸಿದರೆ ಅದರಿಂದ ರಾಜಕೀಯ ಲಾಭ ಆಗಬಹುದು ಎಂಬುದು ಅವರ ಲೆಕ್ಕಾಚಾರ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇ ಆದಲ್ಲಿ ಸಿದ್ದರಾಮಯ್ಯ ಪರ- ವಿರೋಧ ಚಟುವಟಿಕೆಗಳು ಕಾಂಗ್ರೆಸ್ ನಲ್ಲಿ ಬಿರುಸುಗೊಂಡು ಪಕ್ಷ- ಸರ್ಕಾರ ಸಂಕಷ್ಟಕ್ಕೆ ಸಿಕ್ಕುವ ಸಾಧ್ಯತೆಗಳನ್ನು ಮನಗಂಡಿರುವ ಬಿಜೆಪಿಯ ದಿಲ್ಲಿ ನಾಯಕರು ವಿಧಾನಸಭೆ ಚುನಾವಣೆಗೆ ಸಿದ್ಧರಾಗಿರುವಂತೆ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ ಎಂಬುದನ್ನು ಪಕ್ಷದ ಉನ್ನತ ಮೂಲಗಳೇ ಖಚಿತ ಪಡಿಸಿವೆ.
ಬೆಳಗಾವಿಯ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವ ಹಾಗೂಜೆ.ಡಿ.ಎಸ್. ನಾಯಕ ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ ಸಮಾಲೋಚನೆ ನಡೆಸಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಡಿಕೆಶಿ ವಿರುದ್ಧ ಸಿಡಿದ ಜಾರಕಿಹೊಳಿ
ಮತ್ತೊಂದು ಕಡೆ ಇಡೀ ಜಾರಕಿಹೊಳಿ ಕುಟುಂಬ ಪಕ್ಷಾತೀತವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸೆಟೆದು ನಿಂತಿದೆ. ಇದು ಸಹಜವಾಗಿ ಮುಖ್ಯಮಂತ್ರಿ ಸ್ಥಾನಕ್ಕೇರುವ ಮಹತ್ವಾಕಾಂಕ್ಷೆ ಹೊಂದಿರುವ ಶಿವಕುಮಾರ್ ಗೆ ಅಡ್ಡಿಯಾಗಿದೆ.
ಈ ಎಲ್ಲ ಬೆಳವಣಿಗೆಗಳು ಒಂದು ಕಡೆಯಾದರೆ. ಬಿಜೆಪಿಯಲ್ಲೂ ಎಲ್ಲವೂ ಸರಿ ಇಲ್ಲ. ಹಿರಿಯ ಮುಖಂಡ ಬಸವನಗೌಡ ಪಾಟೀಲ ಯತ್ನಾಳ, ಶಾಸಕ ಹರೀಶ, ಹಿರಿಯ ಮುಖಂಡ ರಮೇಶ ಜಾರಕಿಹೊಳಿ ಸೇರಿದಂತೆ ಪ್ರಮುಖರ ದಂಡೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಿಡಿದು ನಿಂತಿದೆ.
ಈ ಬಣಕ್ಕೆ ಬಿಜೆಪಿ ರಾಷ್ಟ್ರೀಯ ಸಮಿತಿಯ ಪ್ರಮುಖ ಪದಾಧಿಕಾರಿಯೊಬ್ಬರ ಕೃಪಾಶೀರ್ವಾದ ಇದೆ.ಈ ಕಾರಣಕ್ಕಾಗೇ ಯತ್ನಾಳ ಮತ್ತಿತರ ಭಿನ್ನಮತೀಯರ ವಿರುದ್ಧ ರಾಷ್ಟ್ರೀಯ ಸಮಿತಿ ಶಿಸ್ತುಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಇದರಿಂದ ಬೇಸತ್ತಿರುವ ಹಿರಿಯ ನಾಯಕ ಯಡಿಯೂರಪ್ಪ ಈ ಎಲ್ಲ ಸಮಸ್ಯೆಗಳ ನಿವಾರಣೆಗೆ ಮಧ್ಯಂತರ ಚುನಾವಣೆಯೇ ದಾರಿ ಎಂಬ ತೀರ್ಮಾನಕ್ಕೆ ಬಂದಿದ್ದು ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ವರಿಷ್ಠರಿಗೂ ಅದೇ ಸರಿಯಾದ ಸೂತ್ರ ಎಂಬ ಅಂಶ ಮನವರಿಕೆ ಆಗಿದೆ.
ಸದ್ಯದ ಮಾಹಿತಿ ಪ್ರಕಾರ ರಾಜ್ಯಪಾಲರ ನಿರ್ಧಾರದಿಂದ ಸಿದ್ದರಾಮಯ್ಯ ಸರ್ಕಾರ ಪತನವಾದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಏರುವುದನ್ನು ತಡೆಯಲು ಸಂವಿಧಾನದಲ್ಲಿನ ಅವಕಾಶಗಳನ್ನು ಬಳಸಿಕೊಂಡು ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ಈ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಕೆಲವು ಪ್ರಮುಖ ನಿರ್ಧಾರಗಳ ಬಗ್ಗೆ ತನಿಖೆ ನಡೆಸಿ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರನ್ನು ಸಾರ್ವಜನಿಕರ ದೃಷ್ಟಿಯಲ್ಲಿ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ನಿಷ್ಠುರ ಕ್ರಮ ಕೈಗೊಂಡಿರುವುದಾಗಿ ಬಿಂಬಿಸುವ ಉದ್ದೇಶ ಹೊಂದಿದೆ ಎಂಬುದು ಈ ಬೆಳವಣಿಗೆಗಳ ಆಂತರ್ಯ ಬಲ್ಲ ಮುಖಂಡರು ಹೇಳುವ ಮಾತು.
ಏಕಾಏಕಿ ಚುನಾವನೆಗೆ ಹೋದರೆ ಹಿಂದುಳಿದ ವರ್ಗಗಳು ಬಿಜೆಪಿ ವಿರುದ್ಧ ಸಿಡಿದೆದ್ದು ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಅಂಜಿಕೆಯೂ ಬಿಜೆಪಿ ನಾಯಕತ್ವಕ್ಕಿದೆ. ಈ ಹಿನ್ನಲೆಯಲ್ಲೇ ಪ್ರಭಾವಿ ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿಯವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಆರಂಭವಾಗಿದೆ. ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗರ ಜಿಲ್ಲೆಗಳಲ್ಲಿ ದೇವೇಗೌಡರ ಪ್ರಭಾವ ಮುಂಬೈ ಕರ್ನಾಟಕ ಪ್ರಾಂತ್ಯವೂ ಸೇರಿದಂತೆ ಪರಿಶಿಷ್ಟ ಪಂಗಡದವರು ಇರುವ ಪ್ರದೇಶಗಳಲ್ಲಿ ಸತೀಶ್ ಗೆ ಇರುವ ಪ್ರಭಾವ ಇವೆರಡರ ಜತೆಗೇ ಯಡಿಯೂರಪ್ಪ ಪ್ರಭಾವವೂ ಸೇರಿದರೆ ಬಿಜೆಪಿ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳನ್ನು ಪಡೆಯುವುದು ಖಚಿತ ಎಂಬುದು ದಿಲ್ಲಿ ನಾಯಕರ ಲೆಕ್ಕಾಚಾರ. ರಾಜ್ಯದ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆಗಳು ಕೌತುಕಮಯವಾಗಿರುತ್ತವೆ ಎಂಬುದಂತೂ ಸತ್ಯ.