ಸಿದ್ಧರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ: ಭಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಅಂದರೆ ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆರೋಪಗಳು ಕೇಳಿ ಬಂದಾಗ, ಸಣ್ಣ ರೈಲ್ವೆ ಅಪಘಾತ ಆದಾಗ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ನೈತಿಕ ಹೊಣೆ ಹೊತ್ತು ಈ ಮೊದಲು ರಾಜೀನಾಮೆ ನೀಡುತ್ತಿದ್ದರು. ಆದರೆ, ಈಗ ಇಂತಹ ದೊಡ್ಡ ಆರೋಪ ಕೇಳಿ ಬಂದರೂ ಸಿದ್ಧರಾಮಯ್ಯ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದು ಟೀಕಿಸಿದರು.

ರಾಜೀನಾಮೆ ಕೊಡಬೇಕೋ, ಬೇಡವೋ ಎಂಬುದು ಅವರಿಗೆ ಬಿಟ್ಟ ವಿಚಾರ. ಆದರೆ, ತಮ್ಮ ಕೈಕೆಳಗೆ ಲೋಕಾಯುಕ್ತ ತನಿಖೆ ನಡೆಯಬೇಕಾಗುತ್ತದೆ. ಹೀಗಿದ್ದರೂ ಸಿಎಂ ರಾಜೀನಾಮೆ ಕೊಡುವುದಿಲ್ಲ. ಮೊದಲು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಹೇಳಿದರು.
ಬಿಜೆಪಿ ಪಕ್ಷದ ವರಿಷ್ಠರೇ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ನಿರ್ಧಾರವನ್ನು ನಾನು ಒಪ್ಪುತ್ತೇನೆ. ಭಿನ್ನಾಭಿಪ್ರಾಯ ಎಲ್ಲ ಪಕ್ಷಗಳಲ್ಲೂ ಇರುತ್ತದೆ. ಆದರೆ, ಅದನ್ನು ಶಾಸಕಾಂಗ ಸಭೆಯಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ವಿಜಯೇಂದ್ರ ವಿರುದ್ಧ ಕೇಳಿ ಬರುತ್ತಿರುವ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದರಲ್ಲದೇ, ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಸಹೋದರ ರಮೇಶ್ ಜಾರಕಿಹೊಳಿಗೆ ಬಾಲಚಂದ್ರ ಟಾಂಗ್ ಕೊಟ್ಟರು.
