ಬೆಳಗಾವಿ;
ದಲಿತ ಯುವಕನ ಮೇಲೆ ಅನ್ಯ ಕೋಮಿನ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಬಜರಂಗ ದಳ ಕಾರ್ಯಕರ್ತರು ಇಲ್ಲಿನ ಚೆನ್ನಮ್ಮ ವೃತ್ತರದಲ್ಲಿ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದರು.

ಬೆಳಗಾವಿಯ ರಾಮನಗರ (ಸಮಿತಿ ಕಾಲೇಜಿನ ಹತ್ತಿರ) ದಲ್ಲಿ ಹಿಂದುಳಿದ ಸಮಾಜದ ಯುವಕನ ಮೇಲೆ 15ಕ್ಕೂ ಹೆಚ್ಚು ಅನ್ಯ ಕೋಮಿನ ಯುವಕರು ಗೂಂಡಾವರ್ತನೆ ತೋರಿದ್ದಲ್ಲದೇ, ಮಾರಣಾಂತಿಕವಾಗಿ ಹಲ್ಲೆ ಮಾಡಿದರು.ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹಿಂದೂ ಸಮಾಜದ ಮುಖಂಡರಾಗಿರುವ ಕೃಷ್ಣ ಭಟ್ಟ ಸೇರಿದಂತೆ ಬಜರಂಗ ದಳದ ಕಾರ್ಯಕರ್ತರು, ದಲಿತ ಸಮುದಾಯದ ಮಹಿಳೆಯರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಲ್ಲೆಕೋರರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಭಟ್ಟ, ನಗರ ಸೇರಿದಂತೆ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ಜರುಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅನ್ಯ ಕೋಮಿನ ಯುವಕರು ಹಿಂದೂ ಯುವಕರ ಮೇಲೆ ಗೂಂಡಾವರ್ತನೆ ತೋರುತ್ತಿದ್ದರೂ ಕೂಡ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಘಟನೆಗಳನ್ನು ತಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದೊಂದು ತಿಂಗಳ ಹಿಂದೆಯೇ ಹಿಂದು ಯುವಕನ ಮೇಲೆ ಹಲ್ಲೆ ಮಾಡಿದಾಗ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಈಗ ಮತ್ತೆ ಹಲ್ಲೆ ಮಾಡಿರುವುದು ಖಂಡನಾರ್ಹ.
ಹಲ್ಲೆಕೋರರಿಂದ ಗಂಭೀರವಾಗಿ ಗಾಯಗೊಂಡಿರುವ ದಲಿತ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

