ಸಿದ್ದಲಿಂಗ ಕೈವಲ್ಯಾಶ್ರಮದ ಜಾತ್ರಾ ಮಹೋತ್ಸವ

ಮೂಡಲಗಿ:

ಘಟಪ್ರಭೆಯ ಪುಣ್ಯ ನದಿ ತೀರದಲ್ಲಿ ಶೋಭಿಸುತ್ತಿರುವ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ನಿಜಗುಣ ದೇವ ಮಹಾಸ್ವಾಮಿಗಳು ಸಿದ್ದಲಿಂಗ ಕೈವಲ್ಯಾಶ್ರಮ ನಿರ್ಮಿಸಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇಯಾದ ವಿಶಿಷ್ಠ ಸೇವೆಯನ್ನು ಸಲ್ಲಿಸುವ ಮೂಲಕ ಈ ಭಾಗದಲ್ಲಿ ಅಧ್ಯಾತ್ಮಿಕ ಸಂಘಟನೆಯನ್ನು ಕೈಗೊಂಡು ಹುಣಶ್ಯಾಳ ಪಿ.ಜಿಯನ್ನು ಸುಕ್ಷೇತ್ರವನ್ನಾಗಿಸಿದ್ದಾರೆಂದು ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟ(ಬೆಮ್ಯುಲ್)ದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಿಜಗುಣ ದೇವರ ಸೇವಾ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಶುಕ್ರವಾರದಂದು ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ನಡೆಯುತ್ತಿರುವ ಸಿದ್ದಲಿಂಗ ಕೈವಲ್ಯಾಶ್ರಮದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೂವಿನ ಸುಗಂಧದಂತೆ ಹುಣಶ್ಯಾಳ ಪಿ.ಜಿ. ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿಯು ಸಿದ್ದಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿಗಳಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಕಳೆದ ಮೂರು ದಶಕಗಳಿಂದ ಈ ಮಠದ ಶ್ರೀಗಳು ಮಠದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಜೊತೆಗೆ ಹಲವಾರು ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ಸದ್ಭಕ್ತರಿಗೆ ಆಧ್ಯಾತ್ಮಿಕ ವಾತಾವರಣವನ್ನು ಉಣಬಡಿಸುತ್ತಿದ್ದಾರೆ. ಪ್ರತಿವರ್ಷವೂ ಭಕ್ತರ ಸಹಕಾರದೊಂದಿಗೆ ಅದ್ದೂರಿಯಾಗಿ ಹೊಸ ವರ್ಷದ ಆರಂಭದ ದಿನದಂದು ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಢೇರಿಸಿ ಭಕ್ತರ ಪಾಲಿಗೆ ಕಾಮಧೇನುವಾಗಿದ್ದಾರೆ. ಈ ಮೂಲಕ ಭವ್ಯ ಪರಂಪರೆಯ ದಿವ್ಯ ಶಕ್ತಿಯಾಗಿ ಸೇವಾ ಪರಂಪರೆಗೆ ಶ್ರೀಗಳು ಸಾಕ್ಷಿಯಾಗಿದ್ದಾರೆಂದು ಅವರು ತಿಳಿಸಿದರು.

ಪೀಠಾಧಿಪತಿ ನಿಜಗುಣದೇವ ಮಹಾಸ್ವಾಮಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಮುಖಂಡರಾದ ಗುರುಸಿದ್ದಪ್ಪ ಕರಬನ್ನಿ, ಬಸು ಕಾಡಾಪೂರ, ರಾಮನಾಯಿಕ ನಾಯಿಕ, ಶಂಕರ ಇಂಚಲ್, ಶಬ್ಬೀರ ತಾಂಬಿಟಗಾರ, ಈಶ್ವರ ಅಂಕಲಗಿ, ಸಿದ್ಧಾರೂಡ ಇಂಚಲ, ಬಸವರಾಜ ಘೋರ್ಪಡೆ, ಬಸಗೌಡ ನಾಯಿಕ, ಸಲೀಮ್ ಜಮಾದಾರ, ಹಣಮಂತ ಶೆಕ್ಕಿ, ಬಸು ಗಲಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

error: Content is protected !!