ಬೆಳಗಾವಿ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವ- ಐವರು ಎತ್ತಂಗಡಿ…!
ಕಚೇರಿಯೇ ಏಜೆಂಟ್ ಕೇಂದ್ರ? ಆಯುಕ್ತರಿಂದ ಶುದ್ಧೀಕರಣದ ಮೊದಲ ಹಂತ”
ಸೌಲಭ್ಯ ಶುಲ್ಕದ ಹೆಸರಲ್ಲಿ ದಂಧೆ! ಕಂದಾಯ ಶಾಖೆಯ ಐವರು ಅಧಿಕಾರಿಗಳ ಎತ್ತಂಗಡಿ”
ಸರ್ಕಾರದ ನಿರೀಕ್ಷೆಗಳಿಗೂ, ಜನತೆಯ ನಿರೀಕ್ಷೆಗೂ ನ್ಯಾಯ ಕೊಡಬೇಕಾದ ಹೊಣೆಗಾರಿಕೆ ಇದೀಗ ಪಾಲಿಕೆ ಆಯುಕ್ತರ ಮೇಲಿದೆ. ಕಂದಾಯ ಶಾಖೆ ಶುದ್ಧವಾಗಬೇಕು ಅಂದರೆ, ಎತ್ತಂಗಡಿ ಸಾಕಾಗದು — ಕಾನೂನಾತ್ಮಕ ಕ್ರಮ, ನ್ಯಾಯಾತ್ಮಕ ತನಿಖೆ ಮತ್ತು ಸಾರ್ವಜನಿಕ ತಪಾಸಣೆಯ ಅಗತ್ಯವಿದೆ.
ಬೆಳಗಾವಿ: ಇದೇನು ಹೊಸ ವಿಷಯವಲ್ಲ, ಆದರೆ ಈ ಬಾರಿ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಭ್ರಷ್ಟಾಚಾರಕ್ಕೆ ವಿರುದ್ಧ ಧ್ವನಿ ಎತ್ತಿದವರು ನಾಗರಿಕರು ಅಲ್ಲ, ನಗರಸೇವಕರೇ. ಭ್ರಷ್ಟತೆಯ ಕುರಿತಾಗಿ ಬಹುಕಾಲದಿಂದ ಹರಿದ ಹರಿವು ಇದೀಗ ತೀವ್ರ ಆಕ್ರೋಶದ ರೂಪ ತಾಳಿದ್ದು, ಅಧಿಕಾರಿಗಳೇ ಆರೋಪದ ಗುರಿಯಾಗಿದ್ದಾರೆ. ಈ ಬೆನ್ನಲ್ಲೇ ಪಾಲಿಕೆ ಆಯುಕ್ತರು ಕೈಗೊಂಡ ತೀರ್ಮಾನವು ‘ಬದಲಾಗುತ್ತಾ ಆಡಳಿತ?’ ಎಂಬ ಪ್ರಶ್ನೆಗೆ ಹೊಸ ಅರ್ಥ ತುಂಬುತ್ತಿದೆ.
‘ಸೌಲಭ್ಯ ಶುಲ್ಕ’ ಎಂಬ ನಾಮಧೇಯದಲ್ಲಿ ಸಂಗ್ರಹವಾಗುತ್ತಿದ್ದ ಅನಧಿಕೃತ ಹಣ, ತೆರಿಗೆ ಮೌಲ್ಯ ನಿರ್ಧಾರದಲ್ಲಿ ವಂಚನೆ ಮತ್ತು ಕಚೇರಿಯೇ ಏಜೆಂಟರ ತಾಣವಾಗಿ ಪರಿವರ್ತನೆಯಾಗಿರುವ ವಾಸ್ತವತೆ — ಇವೆಲ್ಲವೂ ಈಗ ಅಧಿಕೃತ ದಾಖಲೆಗಳ ಆಧಾರದ ಮೇಲೆ ಮೇಲ್ದರ್ಜೆಗೆ ಬಂದಿದೆ.
ಈ ಹಿನ್ನೆಲೆಯಲ್ಲಿ, ಪಾಲಿಕೆ ಆಯುಕ್ತೆ ಶುಭ ಬಿ. ಅವರು ಕ್ರಮ ಕೈಗೊಂಡಿದ್ದು, ಕಂದಾಯ ಶಾಖೆಯ ಐವರು ಸಿಬ್ಬಂದಿಯನ್ನು ಅಂತರಿಕವಾಗಿ ಎತ್ತಂಗಡಿ ಮಾಡಿ ಆದೇಶಿಸಿದ್ದಾರೆ. ಈ ಕ್ರಮಕ್ಕೆ ಆಡಳಿತದ ಒಳಗೂ, ಹೊರಗೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಎತ್ತಂಗಡಿಗೊಳಗಾದ ಸಿಬ್ಬಂದಿ:
ಪವನ್ ದೇವರಗುಡಿ
ಅಮಿತಿ ಗಂಧಡೆ
ಮಲ್ಲಿಕಾರ್ಜುನ ಹಿರೋಳ್ಳಿ
ಸಂತೋಷ ಓಸಿ
ರವಿ ಪುರೇಕರ
ಇವರ ಮೇಲೆ ಮುಂದೆ ತನಿಖಾ ಪ್ರಕ್ರಿಯೆ ನಡೆಯುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸುತ್ತಿವೆ.
ವಲಯ ಆಯುಕ್ತರ ನೇಮಕ: ಆಡಳಿತ ಸುಧಾರಣೆಗೆ ನಿಜವಾದ ಆರಂಭವೇ?
ಇನ್ನೂ ಒಂದು ಭ್ರಷ್ಟ ವ್ಯವಸ್ಥೆಗೆ ತಿದ್ದೆ ಬಿದ್ದಿದ್ದು, ಪಾಲಿಕೆಯಲ್ಲಿ ವಲಯ ಆಯುಕ್ತರ ನೇಮಕಾತಿ. ಈ ವಿಚಾರವನ್ನು ಸರ್ಕಾರದ ಆದೇಶವಾಗಿ ಸಾಕಷ್ಟು ದಿನಗಳ ಹಿಂದೆ ಪ್ರಕಟಿಸಲಾಗಿದ್ದರೂ, ಪಾಲಿಕೆಯೊಳಗಿನ ರಾಜಕೀಯ ಲಾಬಿ ಹಾಗೂ ನಿರ್ಲಕ್ಷ್ಯದಿಂದಾಗಿ ಅದು ಶಬ್ದದೊಳಗಿನ ಶೂನ್ಯವಾಗಿತ್ತು.
ಈಗ ಆಯುಕ್ತರು ನಿಜವಾದ ಸುಧಾರಣೆಯ ನಾದವನ್ನು ಮೊಟ್ಟಮೊದಲ ಬಾರಿಗೆ ನುಡಿಸಿದ್ದಾರೆ. ಮೂವರು ಪ್ರತ್ಯೇಕ ವಲಯ ಆಯುಕ್ತರನ್ನು ನೇಮಿಸಿ, ಎಲ್ಲ ಕಚೇರಿ ಮಟ್ಟದ ಅಶಿಸ್ತಿಗೆ ಕಡಿವಾಣ ಹಾಕುವ ಪ್ರಯತ್ನ ಆರಂಭವಾಗಿದೆ.
ನೇಮಕಗೊಂಡ ವಲಯ ಆಯುಕ್ತರು:
ಉದಯಕುಮಾರ ತಳವಾರ (ಉಪ ಆಯುಕ್ತ): ವಾರ್ಡ್ 1 ರಿಂದ 20
ಅನಿಲ್ ಬೋರಗಾವಿ (ಕಂದಾಯ ಅಧಿಕಾರಿ): ವಾರ್ಡ್ 21 ರಿಂದ 39
ಸಂತೋಷ ಆನಿಶೆಟ್ಟರ: ವಾರ್ಡ್ 40 ರಿಂದ 58
ಇವರಿಗೆ ನೇಮಕಾತಿಯ ಜತೆಗೆ, ಖಾತಾ ಬದಲಾವಣೆ, ತೆರಿಗೆ ನವೀಕರಣ, ಹೊಸ ಆಸ್ತಿ ಸೇರ್ಪಡೆ ಸೇರಿದಂತೆ ಎಲ್ಲಾ ದಾಖಲೆ ಕಾರ್ಯಗಳನ್ನು ಕಾನೂನುಬದ್ಧವಾಗಿ ಹಂತದಲ್ಲಿಯೇ ತೀರ್ಮಾನಿಸಬೇಕೆಂಬ ಶಕ್ತಿ ಹಾಗೂ ಹೊಣೆಗಾರಿಕೆ ನೀಡಲಾಗಿದೆ.
2399 ಚದರ ಅಡಿಗಿಂತ ಮೇಲ್ಪಟ್ಟ ಆಸ್ತಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರನ್ನು ಜವಾಬ್ದಾರಿಗೊಳಿಸಲಾಗಿದೆ. ಈ ಎಲ್ಲ ಕ್ರಮಗಳು, ಪಾಲಿಕೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ತಾರತಮ್ಯದ ವ್ಯವಸ್ಥೆಗೆ ಅಂತ್ಯವನ್ನೊಡ್ಡುವ ದಾರಿ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.
ಕೋಟಿ ಕೋಟಿ ತೆರಿಗೆ ಪಾವತಿಸದೆ ಬಿದ್ದಿರುವ ಕಂಪನಿಗಳ ಕುರಿತು ಮೌನ ಯಾಕೆ?
ಅದರ ಜತೆಗೆ ಇನ್ನೊಂದು ಪ್ರಮುಖ ಸಂಗತಿ, ಈಗ ಬೆಳಕಿಗೆ ಬರುತ್ತಿದೆ. ಬೆಳಗಾವಿ ಹೊರವಲಯದಲ್ಲಿರುವ ಹೆಲ್ಮೆಟ್ ತಯಾರಿಕಾ ಖಾಸಗಿ ಕಂಪನಿಯೊಂದರಿಂದ ಪಾಲಿಕೆಗೆ ಬರಬೇಕಾದ ಕೋಟಿಗಟ್ಟಲೆ ತೆರಿಗೆ ಬಾಕಿ ಉಳಿದಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆದುಹೋಗಿದೆ. ಆದರೆ, ಅದನ್ನು ಜಾರಿಗೆ ತರಬೇಕಾದ ಅಧಿಕಾರಿಗಳು ಕ್ರಮವೇನು ತೆಗೆದುಕೊಂಡಿಲ್ಲ.
ಹೀಗಾಗಿ, “ನಿಯಮವು ಸಾಮಾನ್ಯ ಜನರಿಗೆ ಮಾತ್ರವೇ..? ದೊಡ್ಡ ಕಂಪನಿಗಳಿಗೆ ವಿನಾಯಿತಿ ಯಾಕೆ?” ಎಂಬ ಜನರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲ. ಇದೊಂದು ಕಂದಾಯ ಶಾಖೆಯ ನಿರ್ಲಕ್ಷ್ಯವೋ, ಅಥವಾ ಉದ್ದೇಶಿತವಾಗಿ ಕವಚ ಒದಗಿಸಿದದೇನೋ ಎಂಬ ಅನುಮಾನವೂ ಮೂಡಿದಂತಾಗಿದೆ.
ಇದು ಶುರು ಮಾತ್ರ, ಶುದ್ಧತೆಗಾಗಿ ಇನ್ನೂ ಸುದೀರ್ಘ ಹೋರಾಟ ಬೇಕು
ಇಲ್ಲಿನ ಬೆಳವಣಿಗೆಗಳು, ಪಾಲಿಕೆಯಲ್ಲಿ ಶುರುವಾಗುತ್ತಿರುವ ಅಸಾಮಾನ್ಯ ಕ್ರಾಂತಿಯ ಆರಂಭವಿರಬಹುದು. ಆದರೆ, ಇದರ ಪರಿಣಾಮಕಾರಿ ಅನುಷ್ಠಾನ ಹಾಗೂ ಭ್ರಷ್ಟತೆಯ ಹಿನ್ನಲೆಗಿನ ‘ಮಾಸ್ಟರ್ಮೈಂಡ್’ ಗಳನ್ನು ಹೊರತೆಗೆದು ಕಾನೂನಿನ ಮುಂಭಾಗಕ್ಕೆ ತಂದು ನಿಲ್ಲಿಸುವವರೆಗೂ, ಇದು ಪೂರ್ಣವಲ್ಲ.