ಬೆಳಗಾವಿ.
ಬೀಮ್ಸ್ ಕಾರ್ಯಕ್ರಮಕ್ಕೆಂದು ಬೆಳಗಾವಿಗೆ ಆಗಮಿಸಿದ್ದ ಯುನೈಟೆಡ್ ಕಿಂಗಡಮ್ನ ನಾರ್ಥವ್ಹೆಲ್ ಬಾಡೆಲ್ ವಿಡನ್ನ ಕನ್ನಡಿಗ ಕೌನ್ಸಿಲರ್ ರಾಜೀವ್ ಕೃಷ್ಣಾ ಮೇತ್ರಿ ಅವರನ್ನು ಪಾಲಿಕೆಯ ಉಪಮಹಾಪೌರ ವಾಣಿ ವಿಲಾಸ ಜೋಶಿ ಇಂದಿಲ್ಲಿ ಸನ್ಮಾನಿಸಿದರು.
ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದವರಾದ ರಾಜೀವ ಅವರು ಕಳೆದ 20 ವರ್ಷಗಳಿಂದ ಯುಕೆಯಲ್ಲಿ ನೆಲೆಸಿದ್ದಾರೆ.

2001 ರಲ್ಲಿ ಹೆಚ್ಚಿನ ಶಿಕ್ಷಣಕ್ಕೆಂದು ಯುನೈಟೆಡ್ ಕಿಂಗ್ಡಮ್ ಗೆ ಹೋಗಿದ್ದ ಅವರು ಅಲ್ಲಿಯೇ ಉದ್ಯೋಗ ಮಾಡುತ್ತ ಜನಪ್ರಿಯತೆ ಗಳಿಸಿ ಕೌನ್ಸಿಲರ್ ಆದರು.
ಇಂದು ನಡೆದ ಸನ್ಮಾನ ಸಂದರ್ಭದಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆ ಸೇರಿದಂತೆ ಕೌನ್ಸಿಲರ್ ಹೊಣೆಗಾರಿಕೆ ಬಗ್ಗೆ ವಿಸ್ತೃತವಾಗಿ ಚಚರ್ೆ ಮಾಡಿದರು.
ಇವರ ಧರ್ಮಪತ್ನಿ ರೀನಾ ರಾಜೀವ ಮೇತ್ರಿ ಕೂಡ ಸ್ಟಾಫ್ ನರ್ಸ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇತ್ರಿ ಅವರು 38 ವರ್ಷ ಹಳೆಯದಾದ ಕನ್ನಡ ಬಳಗ ಯು.ಕೆ. ಯ ಕಾರ್ಯಕಾರಣಿ ಮಂಡಳಿಯ ಸದಸ್ಯರಲ್ಲದೇ ಖಜಾಂಚಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೌನ್ಸಲರಾಗಿ ನೇಮಕಗೊಂಡ ಇವರ ಸಾಧನೆಯನ್ನು ಪರಿಗಣಿಸಿ ಬ್ರಿಟಿಷ್ ಕನ್ನಡ ಸಮುದಾಯವು ಮೆಚ್ಚುಗೆ ವ್ಯಕ್ತಪಡಿಸಿತ್ತು.