Headlines

ಬೆಳಗಾವಿ ಪಾಲಿಕೆ ಕಂದಾಯ ಭಾನಗಡಿ ಬಯಲು- ರೇಷ್ಮಾ ಎತ್ತಂಗಡಿಗೆ ಕ್ರಮ

ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ವಿರುದ್ಧ ಗಂಭೀರ ಕ್ರಮ ಶಿಫಾರಸು – ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಅಸ್ತು

ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಶಾಖೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ರಾಜ್ಯಮಟ್ಟದ ಗಮನ ಸೆಳೆಯುವ ಮಹತ್ವದ ಬೆಳವಣಿಗೆ ನಡೆದಿದೆ.

ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿವೃತ್ತ ನ್ಯಾಯಾಧೀಶರಿಂದಲೇ ತನಿಖೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಕರ್ತವ್ಯ ಲೋಪದ ಆರೋಪ ಹೊತ್ತಿರುವ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರನ್ನು ತನಿಖೆ ಪೂರ್ಣಗೊಳ್ಳುವವರೆಗೂ ಹುದ್ದೆಯಿಂದ ಬಿಡುಗಡೆ ಮಾಡಲು ಶಿಫಾರಸು ಮಾಡಲಾಗಿದೆ. ತಪ್ಪಿತಸ್ಥರೆಂದು ಸಾಬೀತಾದರೆ ಸರ್ಕಾರಕ್ಕೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವೂ ಕೈಗೊಳ್ಳಲಾಗಿದೆ.

ಕಾವೇರಿದ ವಾತಾವರಣ

ಸಭೆಯ ಆರಂಭದಲ್ಲೇ ಕಂದಾಯ ಶಾಖೆಯ ಅವ್ಯವಹಾರದ ವಿಷಯ ವನ್ನು ವಿರೋಧ ಪಕ್ಷದ ಸದಸ್ಯ ಶಾಹೀದ್ ಪಠಾಣಪ್ರಸ್ತಾಪಿಸಿದರು.

ಆದರೆ ಚರ್ಚೆಯ ಸಂದರ್ಭದಲ್ಲಿ ಶಾಸಕ ಆಸೀಫ್ ಶೇಠರು ಆರೋಪ ಹೊತ್ತ ಅಣ್ಇಕಾರಿಗಳ ಪರವಾಗಿ ನಿಂತು‌ವಾದ ಮಾಡಿದರು.

ಒಂದು ಹಂತದಲ್ಲಿ ಜಿದ್ದಿಗೆ ಬಿದ್ದಂತೆ ಆಡಳಿತ ಗುಂಪಿನವರು ರೇಷ್ಮಾ ತಾಳಿಕೋಟಿ ವಿರುದ್ಧ ಕ್ರಕ್ಕೆ ಮುಂದಾದಾಗ ವಿರೋಧ ಪಕ್ಷದ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಅವರ ಗೈರು ಹಾಜರಾತಿಯಲ್ಲಿ ಆಡಳಿತ ಪಕ್ಷ ನಿರ್ಣಯವನ್ನು ಪಾಸುಮಾಡಿತು.

ಸಿಪಾಯಿಗಳೂ ಮುಂದೆ ಬರಲಿಲ್ಲ

ಮೇಯರ್ ಆದೇಶಿಸಿದರೂ ಸಭಾಂಗಣದ ಬಾಗಿಲು ಹಾಕಲು ಸಿಬ್ಬಂದಿ ಮುಂದೆ ಬರದೆ ವಿಳಂಬವಾದುದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಸಹಿ ಪ್ರಕ್ರಿಯೆಯಲ್ಲೂ ಒಂದು ಗಂಟೆಗೂ ಹೆಚ್ಚು ಸಮಯ ಕಳೆಯಲ್ಪಟ್ಟಿದ್ದು, “ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡಬೇಡಿ” ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

*ವೇಗಾ ಕಂಪನಿ ತೆರಿಗೆ ವಂಚನೆ ಪ್ರಕರಣದ ಪ್ರಸ್ತಾಪ*

ಚರ್ಚೆ ವೇಳೆ ವೇಗಾ ಹೆಲ್ಮೆಟ್ ಕಂಪನಿ 4.70 ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣವೂ ಪ್ರಸ್ತಾಪಕ್ಕೆ ಬಂದಿತು. ಆಯುಕ್ತರು ಈ ಪ್ರಕರಣ ಈಗ ಲೋಕಾಯುಕ್ತ ತನಿಖೆಯಲ್ಲಿದ್ದು, ಕಂಪನಿ ಕೋರ್ಟ್ ಮೊರೆ ಹೋಗಿದೆ. ಹೀಗಾಗಿ ಸರ್ಕಾರದ ನಿರ್ಣಯ ಕಳಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, “ಉಪ ಆಯುಕ್ತೆ ತಾಳಿಕೋಟಿ ಈ ಪ್ರಕರಣದಲ್ಲಿಯೇ ಆರೋಪಿಯಾಗಿದ್ದಾರೆ. ಹುದ್ದೆಯಲ್ಲಿ ಮುಂದುವರಿದರೆ ಸಾಕ್ಷಿ ತಿರುಚುವ ಅಪಾಯವಿದೆ” ಎಂದು ವಾದಿಸಿದರು.

*ಸೂಪರ್ ಸೀಡ್ ಭೀತಿ – ಸವಾಲಿನ ಪ್ರತಿಕ್ರಿಯೆ*

ಸಭೆಯಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಶೇಠ, “ರಾಜ್ಯ ಸರ್ಕಾರ ಈ ನಿರ್ಣಯವನ್ನು ಸೂಪರ್ ಸೀಡ್ ಮಾಡುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದರು. ಇದಕ್ಕೆ ತೀವ್ರ ಪ್ರತಿಕ್ರಿಯಿಸಿದ ಶಾಸಕ ಅಭಯ ಪಾಟೀಲ, “ಸರ್ಕಾರಕ್ಕಿಷ್ಟು ತಾಕತ್ತು ಇದ್ದರೆ ಸೂಪರ್ ಸೀಡ್ ಮಾಡಲಿ. ಅದನ್ನು ಎದುರಿಸಲು ನಾವು ಸಿದ್ಧ” ಎಂದು ಸವಾಲು ಹಾಕಿದರು.

ರಾಜ್ಯಮಟ್ಟದ ಪ್ರಾಮುಖ್ಯತೆ ಪಡೆದ ಬೆಳವಣಿಗೆ
ಬೆಳಗಾವಿ ಪಾಲಿಕೆ ಕಂದಾಯ ಶಾಖೆಯ ಭ್ರಷ್ಟಾಚಾರ ಪ್ರಕರಣ ಈಗ ಕೇವಲ ಸ್ಥಳೀಯ ವಿಚಾರವಲ್ಲ; ಇದು ರಾಜ್ಯ ರಾಜಕೀಯಕ್ಕೂ ತಲುಪಿರುವ ವಿಷಯವಾಗಿದೆ.
ಸರ್ಕಾರ ಈ ನಿರ್ಣಯವನ್ನು ಯಾವ ದಿಕ್ಕಿನಲ್ಲಿ ನಡೆಸುತ್ತದೆ ಎಂಬುದೇ ಮುಂದಿನ ದಿನಗಳಲ್ಲಿ ರಾಜಕೀಯ ತೀವ್ರತೆಗೆ ಕಾರಣವಾಗಲಿದೆ.

Leave a Reply

Your email address will not be published. Required fields are marked *

error: Content is protected !!