ಹತ್ತು ದಿನಗಳ ಕಬ್ಬು ಹೋರಾಟ ರಾಜ್ಯವನ್ನೇ ಕದಡಿದ ಕಥೆ

“ಗುರ್ಲಾಪುರದಿಂದ ಸರ್ಕಾರ ನಡುಗಿತು!”
ಹತ್ತು ದಿನಗಳ ಕಬ್ಬು ಹೋರಾಟ ರಾಜ್ಯವನ್ನೇ ಕದಡಿದ ಕಥೆ

ಬೆಳಗಾವಿ:

ಮೂಡಲಗಿ ತಾಲೂಕಿನ ಚಿಕ್ಕದಾದ ಗುರ್ಲಾಪುರ ಕ್ರಾಸ್ ಈಗ ರಾಜ್ಯದ ರಾಜಕೀಯ ನಕ್ಷೆಯಲ್ಲಿ ಅತಿದೊಡ್ಡ ಶೀರ್ಷಿಕೆಯಾಗಿದೆ. ಹತ್ತು ದಿನಗಳ ಕಾಲ ಕಬ್ಬಿನ ಸಿಹಿಯ ಹೋರಾಟ ರಾಜ್ಯ ಸರ್ಕಾರದ ನರನಾಡಿ ಕಂಪಿಸುವ ಮಟ್ಟಕ್ಕೆ ತಲುಪಿತು. ರೈತರ ಧ್ವನಿ ಇಷ್ಟು ಗಟ್ಟಿಯಾಗಿ ಮೊಳಗುತ್ತದೆ ಎಂದು ಯಾರೂ ಊಹಿಸಲಿಲ್ಲ.

ಗುರ್ಲಾಪುರದ ಹೋರಾಟ ಹೇಗೆ ಹುಟ್ಟಿತು?

ಕಬ್ಬಿಗೆ ₹3,500 ದರ ನೀಡಬೇಕು ಎಂಬ ಸರಳ ಆಗ್ರಹದಿಂದ ಪ್ರಾರಂಭವಾದ ಹೋರಾಟ, ದಿನಗಳು ಕಳೆದಂತೆ ರಾಜ್ಯಮಟ್ಟದ ಜನಾಂಗದ ಕೋಪದ ಬಿಸಿಗಾಳಿ ಆಯಿತು. ಬೆಳಗ್ಗಿನ ಬಿಸಿಲು, ರಾತ್ರಿ ಚಳಿಗಾಲ — ಯಾವುದೂ ಹೋರಾಟಗಾರರ ಸಂಕಲ್ಪವನ್ನು ಕುಂದಿಸಲಿಲ್ಲ. ಸಾವಿರಾರು ರೈತರು ಗುಡುಗಿದ ಘೋಷಣೆ ಒಂದೇ — “ನ್ಯಾಯ ದರ ಬಯಸುತ್ತೇವೆ!”

ಸರ್ಕಾರದ ಕಿವಿಗೆ ಬಿದ್ದ ರೈತರ ಘೋಷಣೆ

ಆರಂಭದಲ್ಲಿ ಈ ಹೋರಾಟವನ್ನು ಸ್ಥಳೀಯ ಮಟ್ಟದ ಪ್ರತಿಭಟನೆ ಎಂದು ನಿರ್ಲಕ್ಷಿಸಿದ್ದ ಸರ್ಕಾರ, ಜನರ ಅಸಮಾಧಾನದ ಅಲೆ ಏರುತ್ತಿರುವುದನ್ನು ಕಂಡು ದಿಗ್ಭ್ರಮೆಗೊಂಡಿತು. ಇಬ್ಬರು ಸಚಿವರು — ಶುಗರ್ ಸಚಿವ ಶಿವಾನಂದ ಪಾಟೀಲ ಹಾಗೂ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಗುರ್ಲಾಪುರಕ್ಕೆ ಬಂದು ರೈತರ ಜೊತೆ ಮಾತುಕತೆ ನಡೆಸಿದರು. ಆದರೆ ಮಾತುಗಳು ತಂಪಾಗಿದ್ದರೂ ಪರಿಹಾರ ಬಿಸಿಯಾಗಲಿಲ್ಲ. ಸರ್ಕಾರದ ಪ್ರಸ್ತಾಪ ‘ಅಲ್ಪದ’ರೆ, ರೈತರ ಅಸಮಾಧಾನ ‘ಅಮಿತ’.

ಬಿಜೆಪಿಯೂ ಮೈದಾನಕ್ಕಿಳಿದದ್ದು ತಿರುವು ತಂದ ಕ್ಷಣ..

ಹೋರಾಟ ತೀವ್ರಗೊಂಡಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಸ್ವತಃ ಗುರ್ಲಾಪುರಕ್ಕೆ ಭೇಟಿ ನೀಡಿ ರೈತರ ಧ್ವನಿಗೆ ತಲೆಬಾಗಿದರು. ಸರ್ಕಾರದ ವಿರುದ್ಧ ಆಕ್ರೋಶದ ಅಲೆ ಮತ್ತಷ್ಟು ಎತ್ತರಕ್ಕೆ ಏರಿತು. ಹೋರಾಟ ರಾಜಕೀಯ ಬಣ್ಣ ತಾಳಲು ಶುರುವಾದರೂ, ರೈತರ ಹೋರಾಟದ ನಿಷ್ಠೆ ಮಾತ್ರ ಮಸುಕಾಗಲಿಲ್ಲ.

ರಾಷ್ಟ್ರೀಯ ಹೆದ್ದಾರಿ ಬಂದ್ –

ಹೋರಾಟದ ದಶಮ ದಿನ, ಗುರ್ಲಾಪುರ ಕ್ರಾಸ್‌ನಿಂದ ಉಕ್ಕಿನ ಕೋಪದ ಹೊಗೆ ಏರಿತು. ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹತ್ತರಗಿ ಟೋಲ್ ಬಳಿ ಕೆಲ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರೂ, ಪೊಲೀಸರು ಅಚ್ಚರಿಯ ಶಾಂತಿಯುತ ರೀತಿಯಲ್ಲಿ ಪರಿಸ್ಥಿತಿ ನಿಯಂತ್ರಿಸಿದರು. ಲಾಠಿ ಪ್ರಯೋಗವಿಲ್ಲದೆ ನಿಭಾಯಿಸಿದ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.

ವಿಧಾನಸಭೆಯೊಳಗೆ ಕಬ್ಬಿನ ಬಿಸಿ

ಈ ವೇಳೆ, ಬೆಂಗಳೂರಿನ ವಿಧಾನಸಭೆಯೊಳಗೂ ಗುರ್ಲಾಪುರದ ಧ್ವನಿ ಮೊಳಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಗರಂ ಆದರು. “ರೈತರಿಗೆ ನ್ಯಾಯ ಕೊಡದೆ ಯಾರೂ ತಪ್ಪಿಸಿಕೊಳ್ಳಲಾರರು” ಎಂಬ ಸಿದ್ದರಾಮಯ್ಯರ ಘೋಷಣೆ ಸಭೆಗೃಹದೊಳಗೆ ಮೊಳಗಿತು.

ಕೊನೆಗೂ ಸರ್ಕಾರ ಶರಣು –


ಒಂದು ಕ್ಷಣದಲ್ಲಿ ಎಲ್ಲವೂ ಬದಲಾಗಿದೆ. ಹತ್ತು ದಿನಗಳ ಅಹೋರಾತ್ರಿ ಹೋರಾಟ, ಬಿಸಿಲಿನಲ್ಲಿ ಸುಟ್ಟುಕೊಂಡ ರೈತರ ನಂಬಿಕೆ, ಮತ್ತು ಜನರ ಒತ್ತಡದ ಮುಂದೆ ಸರ್ಕಾರ ಕೊನೆಗೂ ಶರಣಾಯಿತು. ಕಬ್ಬಿಗೆ ₹3,500 ಬದಲು ₹3,300 ನೀಡಲು ಸರ್ಕಾರ ಸಮ್ಮತಿಸಿತು.

ಆದರೆ ಇದು ಕೇವಲ ದರದ ಜಯವಲ್ಲ – ಇದು ರೈತರ ಶ್ರಮ, ಸಹನಶೀಲತೆ ಮತ್ತು ಏಕತೆಯ ವಿಜಯ.

ಗುರ್ಲಾಪುರ: ಹೋರಾಟದ ಹೊಸ ಪ್ರಜ್ಞೆಗಾದ ಹಳ್ಳಿ

ಇಂದು ಗುರ್ಲಾಪುರ ಕ್ರಾಸ್ ನಾಮಫಲಕವು ಹೊಸ ಅರ್ಥ ಪಡೆದಿದೆ “ಹೋರಾಟದ ಹಳ್ಳಿ”. ಈ ಹೋರಾಟ ರಾಜ್ಯದ ರೈತರಲ್ಲಿ ಹೊಸ ಪ್ರಜ್ಞೆ, ಹೊಸ ಧೈರ್ಯ ಮತ್ತು ಹೊಸ ಆಶೆಯ ಬಿತ್ತನೆ ಮಾಡಿದೆ.
ಬೆಳಗಾವಿ, ಹತ್ತಿರದ ಮೂಡಲಗಿ, ಅಥಣಿ, ನಿಪ್ಪಾಣಿ ಎಲ್ಲೆಡೆ ರೈತರು
“ಗುರ್ಲಾಪುರ ತೋರಿಸಿದ ದಾರಿ, ರೈತರಿಗೆ ನಂಬಿಕೆಯ ಬೆಳಕು ಎಂದು ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!