ಬೆಳಗಾವಿ.
ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ಮಲ್ಲಪ್ಪನಗುಡ್ಡದಲ್ಲಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇಡೀ ಪ್ರದೇಶಕ್ಕೆ ಹೆಮ್ಮೆಯ ಸಂಕೇತವಾಗಿದೆ.
ಆದರೆ ಆ ಜ್ಞಾನಮಂದಿರಕ್ಕೆ ಹೋಗುವ ದಾರಿಯಲ್ಲೇ ಇಂದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಕಸದ ರಾಶಿ ಮತ್ತು ದುರ್ವಾಸನೆಯ ದುರಂತ ನಿರ್ಮಾಣವಾಗಿದೆ..
ದನದ ಮಾರುಕಟ್ಟೆ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯಲ್ಲಿ ಸಂಚರಿಸುವ ರೈತರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಾಗಬೇಕಾದ ಪರಿಸ್ಥಿತಿ ಬಂದಿದೆ.
ವಿಶ್ವವಿದ್ಯಾಲಯಕ್ಕೆ ಹೋಗುವ ಸಲುವಾಗಿ ದನದ ಮಾರುಕಟ್ಟೆ ಪಕ್ಕದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಗೆ ಆಗ್ರಹಿಸಿ ಆ ಭಾಗದ ರೈತರು ಹಿಂದೆ ಹಲವು ಹೋರಾಟಗಳನ್ನು ನಡೆಸಿದ್ದರು.
ಆದರೆ ಈಗ ಅದೇ ಮಾರ್ಗದಲ್ಲಿ ಸಂಚರಿಸುವುದೇ ಸಾರ್ವಜನಿಕರಿಗೆ ಕಷ್ಟಕರವಾಗಿದೆ.

ಈ ಪರಿಸ್ಥಿತಿಗೆ ಕಾರಣ ಗ್ರಾಮ ಪಂಚಾಯಿತಿಯವರ ಬೇಜವಾಬ್ದಾರಿತನ ಎಂದು ರೈತರು ಆರೋಪಿಸಿದ್ದಾರೆ. ರಸ್ತೆ ಪಕ್ಕದ ಖಾಸಗಿ ಜಮೀನಿನಲ್ಲಿ ಪಂಚಾಯಿತಿಯವರು ಗ್ರಾಮದ ಎಲ್ಲ ಕಸವನ್ನು ತಂದು ಸುರಿದು, ಯಾವುದೇ ಸುರಕ್ಷತಾ ಕ್ರಮವಿಲ್ಲದೆ ಅಲ್ಲಿಯೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಕಸದ ವಿಂಗಡಣೆ, ವೈಜ್ಞಾನಿಕ ಸಂಗ್ರಹಣೆ, ಅಗ್ನಿ ಸುರಕ್ಷತೆ, ಯಾವುದೇ ನಿಯಮವನ್ನು ಪಂಚಾಯತಿಯವರು ಪಾಲನೆ ಮಾಡುತ್ತಿಲ್ಲ.
ಈ ಕಸದ ರಾಶಿ ಮತ್ತು ಹೊಗೆಯಿಂದಾಗಿ ಸುತ್ತ ಮುತ್ತಲಿನ ರೈತರಿಗೆ ಜಮೀನಿನಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದೆ. ಜೊತೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ದುರ್ವಾಸನೆ ಹಾಗೂ ಹೊಗೆಯಿಂದ ಆರೋಗ್ಯ ಮತ್ತು ಜೀವಭಯವೂ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರಿ ಮಾರ್ಗಸೂಚಿಯಂತೆ ಕಸ ಸಂಗ್ರಹಣೆಗೆ ವೈಜ್ಞಾನಿಕ ಘಟಕ ಸ್ಥಾಪಿಸಿ, ಜನವಸತಿ ಹಾಗೂ ಕೃಷಿಭೂಮಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದು ಪಂಚಾಯಿತಿಯ ಕರ್ತವ್ಯ.
ಆದರೆ ಈ ಜವಾಬ್ದಾರಿಯನ್ನು ಪಂಚಾಯಿತಿ ಮರೆತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.
ಇಲ್ಲಿನ ಜಮೀನು ಮಾಲಿಕರಿಗೆ ವರ್ಷಕ್ಕೆ ನಿಗದಿತ ಹಣ ನೀಡುವ ಮೂಲಕ ಕಸ ಹಾಕಲು ಅನುಮತಿ ನೀಡಿರುವ ಪಂಚಾಯಿತಿ ಪಿಡಿಓ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ದುರ್ನಾತವನ್ನು ತಡೆಯಲು ಜಿಲ್ಲಾ ಪಂಚಾಯಿತಿ ಸಿಇಒ ತಕ್ಷಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಹೆಮ್ಮೆಯ ವಿಶ್ವವಿದ್ಯಾಲಯದ ದಾರಿಯಲ್ಲೇ ದುರ್ವಾಸನೆಯ ಕಸಕಡ್ಡಿ ಹರಡುವುದು ಆಡಳಿತ ವೈಫಲ್ಯದ ಪ್ರತೀಕವಾಗಿದ್ದು, ಸರಗಕಾರ ಈ ವಿಚಾರದಲ್ಲಿ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.

