ಈ ಪ್ರಶ್ನೆಗಳಿಗೆ ಉತ್ತರಿಸೋರು ಯಾರು…
ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಕಾಗದಕ್ಕೆ ಮಾತ್ರವೇ?.
ಅಧಿಕಾರಿಗಳ ಅನುಮತಿ ಕಾನೂನಿಗಿಂತ ಮೇಲಾಗಿದೆಯೇ?.
ಪ್ರಭಾವಿಗಳ ವಿರುದ್ಧ ದೂರು ಬಂದರೆ ಡಿಸಿಆರ್ಇ ಕೈಕಟ್ಟಿ ಕುಳಿತುಕೊಳ್ಳಬೇಕೇ?.
ಎಸ್ಸಿ/ಎಸ್ಟಿ ದೌರ್ಜನ್ಯ ದೂರು ಕೈಗೆತ್ತಿಕೊಂಡರೂ ‘ಅನುಮತಿ’ ನೆಪದಲ್ಲಿ ಕಾಲಹರಣ
ಆರ್ಸಿಯು ಪಿಎಚ್ಡಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಟೀಕೆ
ಬೆಳಗಾವಿ:
ಪರಿಶಿಷ್ಟ ಜಾತಿ–ಜನಾಂಗದ ಮೇಲಿನ ದೌರ್ಜನ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿಕೊಂಡರೂ, ಅದನ್ನೇ ಜಾರಿ ಮಾಡಬೇಕಾದ ಅಧಿಕಾರಿಗಳ ನಿರ್ಲಕ್ಷ್ಯವೇ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುತ್ತಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್ಸಿಯು) ಪಿಎಚ್ಡಿ ವಿದ್ಯಾರ್ಥಿನಿ ಸುಜಾತಾ ಪೋಳ್ (34) ಅವರು 19 ನಿದ್ರಾ ಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹಾಗೂ ರಿಜಿಸ್ಟ್ರಾರ್ ಸಂತೋಷ್ ಕಾಮಗೌಡ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಲ್ಲಿಸಿ ನಾಲ್ಕು ದಿನಗಳು ಕಳೆದರೂ ಎಫ್ಐಆರ್ ದಾಖಲಾಗಿಲ್ಲ.
ದೂರು ಸ್ವೀಕರಿಸಿರುವುದನ್ನು ದೃಢಪಡಿಸಿದರೂ, ಪ್ರಕರಣ ದಾಖಲಿಸಲು ಮುಂದಾಗಬೇಕಾದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಮಾತ್ರ ಮೇಲಾಧಿಕಾರಿಗಳ ಅನುಮತಿ ಬೇಕು” ಎಂಬ ಕುಂಟು ನೆಪ ಹೇಳಿ ಕಾಲಹರಣ ಮಾಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಅಧಿಕಾರಿಗಳೇ ಆರೋಪಿಗಳ ಪರವೇ?
ಇಲ್ಲಿ ದೌರ್ಜನ್ಯ ಆರೋಪ ಹೊತ್ತಿರುವವರು ಸಾಮಾನ್ಯ ವ್ಯಕ್ತಿಗಳಲ್ಲ. ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಮತ್ತು ರಿಜಿಸ್ಟ್ರಾರ್.
ಈ ಹಿನ್ನೆಲೆ, ಡಿಸಿಆರ್ಇ ಅಧಿಕಾರಿಗಳು ಆರೋಪಿಗಳ ಪರ ನಿಂತಿದ್ದಾರೆ” ಎನ್ನುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗುತ್ತಿವೆ.

ಎಫ್ಐಆರ್ ದಾಖಲಿಸುವುದು ಕಾನೂನು ಬದ್ಧ ಕರ್ತವ್ಯವಾಗಿದ್ದರೂ, ಅದನ್ನು ಬೆಂಗಳೂರಿನ ಅನುಮತಿಯ ಹೆಸರಿನಲ್ಲಿ ಮುಂದೂಡುವುದು ಕಾನೂನು ಆತ್ಮವನ್ನೇ ಹತ್ಯೆ ಮಾಡುವ ಪ್ರಯತ್ನ ಎಂಬ ಟೀಕೆಗಳು ಕೇಳಿಬರುತ್ತಿವೆ.
ರಾಜ್ಯಪಾಲರಿಂದ ಡಿಸಿ–ಎಸ್ಪಿ ತನಕ ದೂರು .
ಡಿಸೆಂಬರ್ 11ರಂದು ಸುಜಾತಾ ಪೋಳ ಅವರು ಉತ್ತರ ವಲಯ ಐಜಿಪಿ
ಡಿಸಿಆರ್ಇ, ಬೆಳಗಾವಿ
ರಾಜ್ಯಪಾಲರು, ಗೃಹ ಸಚಿವರು,
ಮುಖ್ಯ ಕಾರ್ಯದರ್ಶಿ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು,
ಆರ್ಸಿಯು ಸಿಂಡಿಕೇಟ್ ಸದಸ್ಯರು
ಎಲ್ಲರಿಗೂ ದೂರು ಪ್ರತಿಗಳನ್ನು ರವಾನಿಸಿದ್ದಾರೆ.
ಇಷ್ಟಾದರೂ ಕಾನೂನು ಚಕ್ರ ಮಾತ್ರ ನಿಂತ ಸ್ಥಿತಿಯಲ್ಲೇ ಇದೆ.

‘ಪ್ರಮಾಣಪತ್ರ ತಡೆದು ಮಾನಸಿಕ ಕಿರುಕುಳ’
ಪಿಎಚ್ಡಿ ಪದವಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು, ರಾಜ್ಯಪಾಲರ ಅನುಮೋದನೆ ಬಂದಿದ್ದರೂ, ನನ್ನ ಪದವಿ ಪ್ರಮಾಣ ಪತ್ರವನ್ನು ಉದ್ದೇಶ ಪೂರ್ವಕವಾಗಿ ತಡೆಹಿಡಿಯಲಾಗಿದೆ.
ನನ್ನ ವಿರುದ್ಧ ಸುಳ್ಳು ಪ್ರಚಾರ ನಡೆಸಿ ಗೌರವ ಹಾಳು ಮಾಡಲಾಗಿದೆ”ಎಂದು ಸುಜಾತಾ ದೂರಿದ್ದಾರೆ.
ದೂರು ಹಿಂತೆಗೆಸುವಂತೆ ಒತ್ತಡ – ಬಳಿಕ ಶೋಕಾಸ್!
ತಮ್ಮ ಮಾರ್ಗದರ್ಶಕ ಕೆ.ಎಲ್.ಎನ್. ಮೂರ್ತಿ ವಿರುದ್ಧ ಮಾನಸಿಕ ಕಿರುಕುಳದ ದೂರು ನೀಡಿದಾಗ, ದೂರು ಹಿಂತೆಗೆದುಕೊಂಡರೆ ಪ್ರಮಾಣಪತ್ರ ಕೊಡುತ್ತೇವೆ”
ಎಂಬ ಭರವಸೆ ನೀಡಿ ದೂರು ಹಿಂತೆಗೆಸಿಕೊಂಡು ಈಗ, ಅದೇ ಪತ್ರವನ್ನು ಆಧಾರವಾಗಿ ಬಳಸಿಕೊಂಡು ಶೋಕಾಸ್ ನೋಟಿಸ್ ನೀಡಿದ್ದು ಸ್ಪಷ್ಟವಾದ ಮೋಸ ಎಂದು ಅವರು ಆರೋಪಿಸಿದ್ದಾರೆ.
‘ಜಾತಿ ಆಧಾರಿತ ಟಾರ್ಗೆಟಿಂಗ್’ ಸ್ಪಷ್ಟ .
ತಾವು ಪರಿಶಿಷ್ಟ ಜಾತಿಗೆ ಸೇರಿದವಳಾಗಿರುವುದರಿಂದಲೇ “ನನ್ನನ್ನು ಟಾರ್ಗೆಟ್ ಮಾಡಿ ದೀರ್ಘಕಾಲ ಮಾನಸಿಕ ಕಿರುಕುಳ ನೀಡಲಾಗಿದೆ.
ಅದೇ ಆತ್ಮಹತ್ಯೆ ಯತ್ನಕ್ಕೆ ಕಾರಣ”
ಎಂದು ಸುಜಾತಾ ಸ್ಪಷ್ಟವಾಗಿ ಆರೋಪಿಸಿದ್ದಾರೆ.
ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಡಿಸಿಆರ್ಇ ಸ್ಪಷ್ಟನೆ… ಆದರೆ ಉತ್ತರಗಳಿಲ್ಲ!
ಡಿಸಿಆರ್ಇ ಎಸ್ಪಿ ರವೀಂದ್ರ ಗಡಾಡಿ ಅವರು ದೂರು ಸ್ವೀಕರಿಸಿರುವುದನ್ನು ದೃಢಪಡಿಸಿದ್ದಾರೆ.
ಆದರೆ,
ಎಫ್ಐಆರ್ ಯಾವಾಗ?
ಯಾರ ಅನುಮತಿ?
ಏಕೆ ಇಷ್ಟು ವಿಳಂಬ?

