ರೇಡ್ ಹೆಸರಿನಲ್ಲಿ ದೌರ್ಜನ್ಯ?

ಬೆಳಗಾವಿ ಗ್ರಾಮೀಣ ಪೊಲೀಸರ ಗ್ಯಾಬ್ಲಿಂಗ್ ರೇಡ್ ಪ್ರಕರಣ.

ದೂರು ನೀಡಿದರೂ ವಿಚಾರಣೆ ನಡೆಸದ ಗ್ರಾಮೀಣ ಎಸಿಪಿ.

ತನಿಖೆಗೆ ಡಿಸಿಪಿ ಆದೇಶ; ಆದರೂ ಎಸಿಪಿ‌ ದಿವ್ಯ ಮೌನ.

ದಂಧೆಕೋರರನ್ನು ಹೆಡಮುರಿ ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರ ಕಟ್ಟು ನಿಟ್ಟಿನ ಸೂಚನೆಗೂ ಕ್ಯಾರೆ ಎನ್ನದ ಎಸಿಪಿ ರೂರಲ್..?

ತಪ್ಪಿತಸ್ಥರ ರಕ್ಚಣೆಗೆ ನಿಂತ ಎಸಿಪಿ. ಬೆಳಗಾವಿ ಕಾಪಾಡೋಕೆ ಪರಮೇಶ್ವರನೇ‌ ಬರಬೇಕು?

ಬೆನ್ನಾಳಿಯಲ್ಲಿ PSI ನೇತೃತ್ವದಲ್ಲಿ ಪೊಲೀಸರಿಂದ ಹಲ್ಲೆ–ಹಣ ಕಸಿದು ಆರೋಪ*

*ಬೆತ್ತಲೆ ಮಾಡಿ ಥಳಿಸಿದರೆಂಬ ದೂರು | ₹2.5 ಲಕ್ಷ ಕಣ್ಮರೆಯಾದ ಪ್ರಶ್ನೆ*

ಬೆಳಗಾವಿ:
ಕಾನೂನು ರಕ್ಷಿಸಬೇಕಾದವರೇ ಕಾನೂನು ಉಲ್ಲಂಘಿಸಿದರೇ?
ಬೆಳಗಾವಿ ತಾಲ್ಲೂಕಿನ ಬೆನ್ನಾಳಿ ಗ್ರಾಮದಲ್ಲಿ ನಡೆದ ಗ್ಯಾಂಬ್ಲಿಂಗ್ ರೇಡ್ ವೇಳೆ ಪೊಲೀಸರು ನಿರಪರಾಧ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ, ಲಕ್ಷಾಂತರ ರೂ. ಹಣ ಕಸಿದುಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಂತೋಷ ಚಂದನಮಲ್ ಪರಮಾರ ಎಂಬವರು ಉಪ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದು, ಪೊಲೀಸ್ ಇಲಾಖೆ ಮಾತ್ರವಲ್ಲದೆ ರಾಜ್ಯ ಸರ್ಕಾರದ ಮೇಲೂ ಪ್ರಶ್ನೆಗಳ ಮಳೆ ಸುರಿಸಿದೆ.

ದೂರಿನ ಪ್ರಕಾರ, 11 ನವೆಂಬರ್ 2025ರಂದು ವೈಯಕ್ತಿಕ ಕೆಲಸದ ನಿಮಿತ್ತ ಬೆನ್ನಾಳಿ ಗ್ರಾಮಕ್ಕೆ ತೆರಳಿದ್ದ ಸಂತೋಷ ಪರಮಾರ ಅವರನ್ನು, ಗ್ಯಾಂಬ್ಲಿಂಗ್ ರೇಡ್ ನಡೆಸುತ್ತಿದ್ದ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ PSI ಸಂತೋಷ ಹಾಗೂ ಏಳು ಮಂದಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ರೇಡ್ ಸ್ಥಳದ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯನ್ನು ಗ್ಯಾಂಬ್ಲಿಂಗ್ ಆರೋಪದಡಿ ಬಂಧಿಸಿ, ಅವರ ಬಳಿ ಇದ್ದ ₹2.50 ಲಕ್ಷ ಹಣವನ್ನು ಮಹೇಶ ಎಂಬ ಸಿಬ್ಬಂದಿ ಕಸಿದುಕೊಂಡಿದ್ದಾರೆ ಎಂಬುದು ದೂರುದಾರನ ಗಂಭೀರ ಆರೋಪ.

ರಾತ್ರಿ ಠಾಣೆಗೆ ಎಳೆದೊಯ್ದು ಅಮಾನುಷ ವರ್ತನೆ?
ದೂರುದಾರನ ಹೇಳಿಕೆಯಂತೆ, ರಾತ್ರಿ 1 ಗಂಟೆಯವರೆಗೆ ಠಾಣೆಯಲ್ಲಿ ಇರಿಸಿಕೊಂಡು, ಎರಡು ಬಾರಿ ಬೆತ್ತಲೆ ಮಾಡಿ ಥಳಿಸಲಾಗಿದೆ. ತಲೆಗೆ ಹಾಗೂ ಕಣ್ಣಿನ ಬಳಿ ಗಂಭೀರ ಪೆಟ್ಟುಗಳಾಗಿದ್ದು, ಕಟ್ಟಿಗೆಯಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
“ನಾನು ಗ್ಯಾಂಬ್ಲಿಂಗ್ ಆಡಿರಲಿಲ್ಲ, ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ” ಎಂದು ಸ್ಪಷ್ಟಪಡಿಸಿರುವ ಸಂತೋಷ ಪರಮಾರ, ತನ್ನ ಮೇಲೆ ವಿನಾಕಾರಣ ಗಂಭೀರ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.

*ಇತರರ ಮೇಲೂ ಹಲ್ಲೆ–ಹಣ ವಸೂಲಿ ಆರೋಪ*

ಈ ರೇಡ್ ವೇಳೆ ಸಂತೋಷ ಪರಮಾರರ ಜೊತೆಗೆ ಇದ್ದ
ಅಲಿಸಾಬ ಅನ್ವರ ಮಾಸನಕಟ್ಟೆ, ತವನಪ್ಪಾ ಬೆನ್ನಾಳಿ, ತೋಷಿಕ ಮಹಮ್ಮದಗೌಡ ಫಕೀರ, ಬಾಬು ರಾಮಪ್ಪಾ ದೊಡಮನಿ ಸೇರಿದಂತೆ ಹಲವರ ಮೇಲೂ ಹಲ್ಲೆ ನಡೆಸಿ ಹಣ ಪಡೆದಿದ್ದಾರೆ ಎಂಬ ಆರೋಪ ದಾಖಲಾಗಿದೆ.
ಇನ್ನು ಅತ್ಯಂತ ಗಂಭೀರವಾಗಿ, ನಾಗು ಬಾಗೋಜಿ (ಗೋಕಾಕ) ಎಂಬ ವ್ಯಕ್ತಿಯಿಂದ ₹2.50 ಲಕ್ಷ ಹಣ ಪಡೆದು ಪ್ರಕರಣದಿಂದ ಬಿಡಲಾಗಿದೆ ಎಂಬ ಆರೋಪವೂ ದೂರುದಲ್ಲಿದೆ.
ಇದು ಸಾಬೀತಾದರೆ, ಇದು ಕೇವಲ ದೌರ್ಜನ್ಯವಲ್ಲ, ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರದ ಜೀವಂತ ಸಾಕ್ಷಿ ಎನ್ನಲಾಗುತ್ತದೆ.

*ಯಾರ್ಯಾರು ಆರೋಪಿಗಳು?*

*ಸರ್ಕಾರಕ್ಕೆ ನೇರ ಪ್ರಶ್ನೆ*

ದೂರಿನಲ್ಲಿ PSI ಸಂತೋಷ ಅವರೊಂದಿಗೆ
ಮಹೇಶ, ಬಾಳೇಶ, ಕೊಟಬಾಗಿ, ಚಾಲಕ ಷರೀಪ ಸೇರಿದಂತೆ ಇತರೆ ಸಿಬ್ಬಂದಿಗಳ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.*

*ಕಸಿದುಕೊಂಡ ಹಣದ ಜಪ್ತಿ ಮಹಜರ್ ಎಲ್ಲಿದೆ?*

*ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆಯೇ?*

*FIR ದಾಖಲಿಸಲು ವಿಳಂಬವೇಕೆ?*

ಈ ಪ್ರಕರಣವನ್ನು ಸ್ವತಂತ್ರ ತನಿಖೆ ಅಥವಾ CIDಗೆ ಒಪ್ಪಿಸುವ ಧೈರ್ಯ ಸರ್ಕಾರಕ್ಕಿದೆಯೇ?

*ಪೊಲೀಸ್ ಇಲಾಖೆಯ ಮೌನ?*
ಇಷ್ಟೊಂದು ಗಂಭೀರ ಆರೋಪಗಳ ನಡುವೆಯೂ ಪೊಲೀಸ್ ಇಲಾಖೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.
ರೇಡ್ ಹೆಸರಿನಲ್ಲಿ ದೌರ್ಜನ್ಯ, ಕಾನೂನು ಹೆಸರಿನಲ್ಲಿ ಲಂಚ — ಎಂಬ ಆರೋಪಗಳು ಬೆಳಗಾವಿಯಲ್ಲಿ ಪೊಲೀಸ್ ವ್ಯವಸ್ಥೆಯ ಮೇಲಿನ ಜನರ ನಂಬಿಕೆಗೆ ದೊಡ್ಡ ಧಕ್ಕೆ ತಂದಿವೆ.

Leave a Reply

Your email address will not be published. Required fields are marked *

error: Content is protected !!