ಕ್ರಿಸ್ಮಸ್ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್
ಬೆಳಗಾವಿ: ಯೇಸು ಕ್ರಿಸ್ತರ ಜನ್ಮದಿನದ ಅಂಗವಾಗಿ ನಡೆಯುವ ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಬಡವರಿಗಾಗಿ, ಬಡವರಿಗೋಸ್ಕರ ಹಬ್ಬವನ್ನು ಆಚರಿಸಿ ಎಂದು ಕ್ರೈಸ್ತ ಸಮುದಯದವರಿಗೆ ಬೆಳಗಾವಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡೆರಿಕ್ ಫರ್ನಾಂಡಿಸ್ ಅವರು ಮನವಿ ಮಾಡಿದರು.
ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಬಿಷಪ್ ಹೌಸ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕ್ರಿಸ್ಮಸ್ ಹಬ್ಬದಲ್ಲಿ ಕ್ರೈಸ್ತ ಸಮುದಯದವರು ನ್ಯಾಯಕ್ಕಾಗಿ ಕೆಲಸ ಮಾಡಲು ಮತ್ತು ಕರುಣೆ, ಹಂಚಿಕೆ ಹಾಗೂ ಶಾಂತಿ ಮೆರೆಯುವ ಸಮಾಜ ನಿರ್ಮಿಸಲು ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.
ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ ಸೇರಿ ಬೆಳಗಾವಿ ಧರ್ಮಪ್ರಾಂತ್ಯವು ಐದು ಜಿಲ್ಲೆಗಳನ್ನು ಒಳಗೊಂಡಿದ್ದು, ಇದೇ ಡಿ. 28ನೇ ತಾರೀಖು ನಡೆಯುವ ಕಾರ್ಯಕ್ರಮದಲ್ಲಿ ಸುಮಾರು ಹದಿನೈದು ನೂರು ಜನ ಪಾಲ್ಗೊಳ್ಳದ್ದಾರೆ ಎಂದು ತಿಳಿಸಿದರು.
ಕ್ರಿಸ್ಮಸ್ ಎಂಬುದು ಬಡವರಿಗಾಗಿ, ಬಡವರಿಂದ ಮತ್ತು ಬಡವರೊಂದಿಗೆ ಆಚರಿಸಲ್ಪಡುವ ಹಬ್ಬ. ಮಾನವಕುಲದ ಹಿತಾರ್ಥಕ್ಕಾಗಿ ಯೇಸು ಕ್ರಿಸ್ತನು ತಾನೇ ಬಡವನಾಗಿ ಕೊಟ್ಟಿಗೆಯಲ್ಲಿ ಜನಿಸಿದನು. ಇನ್ನು
ನಮ್ಮ ಧರ್ಮಗುರುಗಳ ಸಂದೇಶ ನೀಡಿದಂತೆ ನಾವೆಲ್ಲರೂ ಈ ವರ್ಷದ ಕ್ರಿಸ್ಮಸ್ ಹಬ್ಬದಲ್ಲಿ ಬಡವರಿಗೆ ಆದ್ಯತೆ ನೀಡೋಣ ಎಂದರು.
ಈಚೆಗೆ ಬೆಳಗಾವಿ ಅಧಿವೇಶನಕ್ಕೆ ಆಗಮಿಸಿದಾಗ ಸಿಎಂ ಸಿದ್ದರಾಮಯ್ಯನವರು ಇಲ್ಲಿನ ಧರ್ಮಪ್ರಾಂತ್ಯಕ್ಕೆ ಭೇಟಿ ನೀಡಿ ಗೌರವ ಸ್ವೀಕರಿಸಿದ್ದು ನನಗೂ ಸಂತಸ ತಂದಿದೆ. ಸಿಎಂ ಸಿದ್ದರಾಯ್ಯನವರೊಂದಿಗೆ ಯಾವುದೇ ವಿಷಯಗಳನ್ನು ಚರ್ಚೆ ಮಾಡಿಲ್ಲ. ಆದರೆ ಕೆಲ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲೂಯಿಸ್ ರೋಡ್ರಿಗಸ್ ಹಾಜರಿದ್ದರು.

