ಅಕ್ರಮ ಗಣಿಗಾರಿಕೆ ತಡೆಗೆ ಮಹಿಳಾ ಅಧಿಕಾರಿಯ ಧೈರ್ಯ
ಬೆಳಗಾವಿ ಗ್ರಾಮೀಣದಲ್ಲಿ ಕಾನೂನು ಬಾಹಿರ ದಂಧೆಗೆ ಸವಾಲು.
JCB ಗೆ ಕಲ್ಲು ಹೊಡೆಯುವ ವಿಡಿಯೋ ಲಭ್ಯ. ಇದರಲ್ಲಿನ ಲಿಂಕ್ ಕ್ಲಿಕ್ ಮಾಡಿ.
ಬೆಳಗಾವಿ:
ಗಡಿನಾಡು ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ದಂಧೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ನೇರವಾಗಿ ಎದುರಾಗಿ ನಿಂತ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ಧಿಡೀರ್ ಭೇಟಿ ನೀಡಿದ ಇಲಾಖೆ ಅಧಿಕಾರಿ ಬಿಂದನ್ ಪಾಟೀಲರು, ಅಕ್ರಮ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಆದರೆ ಸ್ಥಳದಲ್ಲಿದ್ದವರು ಅವರ ಸೂಚನೆಯನ್ನು ಲೆಕ್ಕಿಸದೆ ನಿರ್ಲಕ್ಷ್ಯ ತೋರಿದರು. ಇದೇ ವೇಳೆ ಅಧಿಕಾರಿಯ ಕಾರ್ಯಾಚರಣೆಯನ್ನು ವಿಡಿಯೋ ಮಾಡಲಾರಂಭಿಸಿದಾಗ, ಬಿಂದನ್ ಪಾಟೀಲರು ಕಾನೂನು ಬಾಹಿರ ಚಟುವಟಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಅಲ್ಲಿದ್ದ ಜೆಸಿಬಿಗೆ ನೇರವಾಗಿ ಕಲ್ಲು ಎಸೆದು ಅಕ್ರಮವನ್ನು ತಡೆಯುವ ಪ್ರಯತ್ನ ನಡೆಸಿದರು ಎನ್ನುವುದು ಗೊತ್ತಾಗುತ್ತದೆ.

ಈ ಸಂದರ್ಭದಲ್ಲೇ ಸಂಬಂಧಪಟ್ಟವರನ್ನು ತಕ್ಷಣ ಕರೆಸುವಂತೆ ಅಧಿಕಾರಿ ಸೂಚಿಸಿದರೂ, ಸ್ಥಳದಲ್ಲಿದ್ದವರು ಆ ಮಾತನ್ನು ಪಾಲಿಸಲಿಲ್ಲ.

“ಈ ಅಕ್ರಮ ದಂಧೆ ನಡೆಸಲು ಯಾರು ಸೂಚನೆ ನೀಡಿದ್ದಾರೆ?” ಎಂದು ಅಧಿಕಾರಿ ಪ್ರಶ್ನಿಸಿದಾಗ, ಒಬ್ಬರ ಹೆಸರನ್ನು ಪ್ರಸ್ತಾಪಿಸಲಾಯಿತು. ಆದರೆ ಆ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸದೇ, ಅಲ್ಲಿದ್ದವರು ಮೌನಕ್ಕೆ ಶರಣಾದರು.
ಈ ನಡುವೆ ವೈರಲ್ ಆಗಿರುವ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಬಿಂದನ್ ಪಾಟೀಲರು, “ಇದು ಹಳೆಯ ವಿಡಿಯೋ. ಇತ್ತೀಚಿನ ಘಟನೆಯಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಅಕ್ರಮ ಗಣಿಗಾರಿಕೆ ವಿರುದ್ಧ ಇಲಾಖೆಯ ಅಧಿಕಾರಿ ತೋರಿದ ಧೈರ್ಯ ಮತ್ತು ನಿಲುವು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಗಣಿಗಾರಿಕೆ ದಂಧೆಗೆ ರಾಜಕೀಯ–ಆಡಳಿತಾತ್ಮಕ ರಕ್ಷಣೆ ಇದೆಯೇ ಎಂಬ ಪ್ರಶ್ನೆಗಳನ್ನೂ ಎಬ್ಬಿಸಿದೆ.

