ಹುಕ್ಕುಂದದಲ್ಲಿ ನಡೆದ ಕಾರ್ಯಕ್ರಮ .
ಚಿಕ್ಕಮಗಳೂರು:
“ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ. ಇಲ್ಲಿ ಕಾರ್ಯಕರ್ತರೇ ಬೆಳೆದು ನಾಯಕತ್ವದ ಹಂತಕ್ಕೇರುತ್ತಾರೆ” ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.
ಚಿಕ್ಕಮಗಳೂರು ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ಹುಕ್ಕುಂದದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಅವರು ಮಾತನಾಡಿದರು.

ನಾನು 1988ರಲ್ಲಿ ಬೂತ್ ಕಮಿಟಿ ಅಧ್ಯಕ್ಷನಾಗಿದ್ದೆ. ಪಕ್ಷ ಕೊಟ್ಟ ಜವಾಬ್ದಾರಿಗಳೇ ನನ್ನನ್ನು ಬೆಳೆಸಿವೆ. ಯಡಿಯೂರಪ್ಪ, ನರೇಂದ್ರ ಮೋದಿ, ಎಲ್.ಕೆ. ಅಡ್ವಾಣಿ, ದೇವೇಂದ್ರ ಫಡ್ನವಿಸ್ ಮೊದಲಾದವರು ಕಾರ್ಯಕರ್ತರ ಹಂತದಿಂದಲೇ ಮೇಲಕ್ಕೆ ಬಂದವರು” ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಕುಟುಂಬ ಆಧಾರಿತ ರಾಜಕೀಯಕ್ಕೆ ಒಳಪಟ್ಟಿದ್ದರೆ, ಬಿಜೆಪಿಯಲ್ಲಿ ಕಾರ್ಯಕರ್ತರೇ ಪಕ್ಷದ ನಿಜವಾದ ಶಕ್ತಿ ಎಂದು ಅವರು ಪ್ರತಿಪಾದಿಸಿದರು.

ಜವಾಬ್ದಾರಿಗಳನ್ನು ನೀಡಿ ಕಾರ್ಯಕರ್ತರ ಸಾಮರ್ಥ್ಯ ವೃದ್ಧಿಸುವುದು ಬಿಜೆಪಿಯ ಕಾರ್ಯಪದ್ಧತಿ. ‘ದೇಶವೇ ಮೊದಲು’ ಎಂಬ ಸಿದ್ಧಾಂತದಡಿ ಹಿಂದುತ್ವ, ಸಾಮೂಹಿಕ ನಿರ್ಣಯ ಮತ್ತು ವೈಚಾರಿಕ ಸ್ಪಷ್ಟತೆಯೊಂದಿಗೆ ಪಕ್ಷ ಕಾರ್ಯನಿರ್ವಹಿಸುತ್ತದೆ” ಎಂದರು.
ಆದೇಶ ನೀಡುವುದಕ್ಕಿಂತ ನಾವು ಮಾಡಿ ತೋರಿಸುವ ಮೂಲಕವೇ ಕಾರ್ಯಕರ್ತರಿಗೆ ಸ್ಫೂರ್ತಿ ನೀಡುವುದು ಬಿಜೆಪಿಯ ವೈಶಿಷ್ಟ್ಯ” ಎಂದ ಅವರು, ಜನಪರ ಕಾರ್ಯ ಮತ್ತು ಹೋರಾಟಗಳ ಮೂಲಕ ಪಕ್ಷ ವಿಸ್ತರಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಚ್.ಸಿ. ಕಲ್ಮರುಡಪ್ಪ, ಜಿ.ಎನ್. ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

