ಬೆಳಗಾವಿ:
ನಗರದ ಮಾರುತಿ ಗಲ್ಲಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಗುರುತಿಸಲಾದ ನಾಲ್ಕಂತಸ್ತಿನ ಕಟ್ಟಡದ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಗುರುವಾರ ಜೆಸಿಬಿ ಕಾರ್ಯಾಚರಣೆ ನಡೆಸಿ ಭಾಗಶಃ ತೆರವುಗೊಳಿಸಿತು.
ನಗರದ ಹೃದಯ ಭಾಗದಲ್ಲೇ ನಡೆದ ಈ ಕ್ರಮ ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಅಕ್ರಮ ಕಟ್ಟಡಗಳ ವಿರುದ್ಧ ಪಾಲಿಕೆ ಕೊನೆಗೂ ಕಠಿಣ ನಿಲುವು ತಳೆದಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿರುವ ನಡುವೆಯೇ, ಈ ಕಟ್ಟಡಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳ ಬಳಕೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದರಿಂದ ಪ್ರಕರಣ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಂಡಿದೆ.
ಇನ್ನೊಂದೆಡೆ, ಕಟ್ಟಡದ ಬಾಡಿಗೆದಾರ ಯುನುಸ್ ಜಮಾದಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾವುದೇ ನೋಟಿಸ್ ನೀಡಲಿಲ್ಲ. ಅಂಗಡಿಯಲ್ಲಿದ್ದ ವಸ್ತುಗಳನ್ನು ಹೊರತೆಗೆದುಕೊಳ್ಳಲು ಸಹ ಸಮಯ ಕೊಡಲಿಲ್ಲ. ಪಾಲಿಕೆ ನಮ್ಮ ವಸ್ತುಗಳನ್ನು ವಶಕ್ಕೆ ಪಡೆದು ಲಕ್ಷಾಂತರ ರೂಪಾಯಿ ನಷ್ಟ

ಉಂಟುಮಾಡಿದೆ. ನಷ್ಟಕ್ಕೆ ಪರಿಹಾರ ನೀಡಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ಕಟ್ಟಡಕ್ಕೆ ಅನುಮತಿ ಪಡೆಯುವ ಹಂತದಲ್ಲಿ ದಾಖಲೆಗಳನ್ನು ಯಾರು ಪರಿಶೀಲಿಸಿದರು? ಅವು ನಿಜವಾಗಿದ್ದವೆಯೇ? ನಕಲಿ ದಾಖಲೆಗಳಿದ್ದರೆ ಅವು ಹೇಗೆ ಪತ್ತೆಯಾಗದೆ ಹೋದವು? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

ಈ ಕುರಿತು ಪಾಲಿಕೆ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ತಕ್ಷಣ ಲಭ್ಯವಾಗಿಲ್ಲ.

