“ನೀವೇ ಸುಡಿ” ಎಂದೇ ಕೈ ತೊಳೆದ ಪುತ್ರರು; ಬೆಳಗಾವಿಯಲ್ಲಿ ಸಮಾಜಸೇವಕರಿಂದ ಅಂತ್ಯಸಂಸ್ಕಾರ.
ನೀವೇ ಅಂತ್ಯಕ್ರಿಯೆ ಮಾಡಿ” ಎಂದೇ ಕರೆ ಕಟ್ ಮಾಡಿದ ಪುತ್ರರು;
ಸಂಬಂಧವಿಲ್ಲದ ಸಮಾಜಸೇವಕರಿಂದ ಅಂತಿಮ ವಿಧಿ.
ಹೆತ್ತ ತಾಯಿಯ ಅಂತಿಮ ದರ್ಶನಕ್ಕೂ ಮನಸ್ಸಾಗದ ಮಕ್ಕಳು;
ಬೆಳಗಾವಿಯಲ್ಲಿ ಮಾನವೀಯತೆ ಬೆಚ್ಚಿಬೀಳಿಸಿದ ಘಟನೆ.
ಜನ್ಮಕೊಟ್ಟ ತಾಯಿಯನ್ನು ಚಿತೆಯಲ್ಲೂ ಏಕಾಂಗಿಯನ್ನಾಗಿಸಿದ ಪುತ್ರರು;
ಸ್ಥಳೀಯರಿಂದ ತೀವ್ರ ಆಕ್ರೋಶ.
ರಕ್ತಸಂಬಂಧ ಕೈಕಳೆದು ಹೋದಾಗ ಮಾನವೀಯ ಸಂಬಂಧ ಮುಂದಾದ ದಾರುಣ ಘಟನೆ.
ಹೆತ್ತವರ ಋಣ ಮರೆತ ಪುತ್ರರು; “ಮಗನ ಕರ್ತವ್ಯ” ನೆರವೇರಿಸಿದ ಸಮಾಜಸೇವಕರು.
ಮಕ್ಕಳು ಜೀವಂತ… ಮಮತೆ ಸತ್ತ ಕಥೆಗೆ ಬೆಳಗಾವಿ ಸಾಕ್ಷಿ.
Ebelagavi ವಿಶೇಷ
ಬೆಳಗಾವಿ:
ಒಂಬತ್ತು ತಿಂಗಳು ಹೊತ್ತು, ಸಾಕಿ, ಬೆಳೆಸಿದ ತಾಯಿ ಸತ್ತರೂ ಕಣ್ಣೀರಿಲ್ಲ… ಕೊನೆಯ ದರ್ಶನಕ್ಕೂ ಬರದ ಕಲ್ಲುಹೃದಯ ಮಕ್ಕಳು… “ನೀವೇ ಅಂತ್ಯಕ್ರಿಯೆ ಮಾಡಿ” ಎಂದು ಹೇಳಿ ಫೋನ್ ಕಟ್ ಮಾಡಿದ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಗರದ ಶಾಹುನಗರದ ಅಂಜನಾ ಧಾಮೊನೆ ತಮ್ಮ ಮನೆಯಲ್ಲಿ ನಿಧನರಾದರು. ಇಬ್ಬರು ಗಂಡು ಮಕ್ಕಳಿದ್ದರೂ, ವೃದ್ಧೆ ಕೊನೆಯ ದಿನಗಳಲ್ಲಿ ಅನಾಥೆಯಂತೆ ಬದುಕುತ್ತಿದ್ದರು ಎನ್ನುವುದು ಸ್ಥಳೀಯರ ಬೇಸರ.

ತಾಯಿ ಮೃತಪಟ್ಟ ಸುದ್ದಿ ತಿಳಿಸಲು ಸ್ಥಳೀಯರು ಇಬ್ಬರು ಮಕ್ಕಳಿಗೂ ಕರೆ ಮಾಡಿದರು. ಆದರೆ, ತಾಯಿಯ ಮರಣವೂ ಅವರ ಮನಸ್ಸು ಕದಡಲಿಲ್ಲ. ದುಃಖವನ್ನೂ ತೋರಲಿಲ್ಲ. ಬದಲಿಗೆ, “ನೀವೇ ಅಂತ್ಯಕ್ರಿಯೆ ಮಾಡಿ” ಎಂದು ನಿರ್ದಯವಾಗಿ ಕೈತೊಳೆದಿದ್ದಾರೆ ಎನ್ನಲಾಗಿದೆ. ಹೆತ್ತ ತಾಯಿಯ ಶವದ ಬಳಿಗೂ ಬರದ ಇಂಥ ಪುತ್ರರನ್ನು ಏನು ಕರೆಯಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ತಕ್ಷಣ ನಗರಸೇವಕ ಶಂಕರ ಪಾಟೀಲ ಹಾಗೂ ಸಮಾಜಸೇವಕ ಗಂಗಾಧರ ಪಾಟೀಲ ಅವರಿಗೆ ವಿಷಯ ತಿಳಿಸಿದರು. ಕೂಡಲೇ ಧಾವಿಸಿದ ಅವರು, ರಕ್ತಸಂಬಂಧವಿಲ್ಲದಿದ್ದರೂ ಮಾನವೀಯ ಸಂಬಂಧದಿಂದ ಅಂತ್ಯಸಂಸ್ಕಾರ ನೆರವೇರಿಸಿದರು. ನಿಖಿಲ್ ಅಪ್ಪುಗೋಳ ಮತ್ತು ಸ್ಮಶಾನ ಸಿಬ್ಬಂದಿ ನಿಸ್ಸಾರ ಸಹಕರಿಸಿದರು.

ಜನ್ಮಕೊಟ್ಟ ಮಕ್ಕಳು ದೂರ ನಿಂತಾಗ, ಸಂಬಂಧವಿಲ್ಲದವರು ಮಗನ ಕರ್ತವ್ಯ ಮಾಡಿದ ಈ ಘಟನೆ ಸಮಾಜದ ಮುಖಕ್ಕೆ ಛಡಿ ಬೀಸಿದಂತಾಗಿದೆ. ಪುತ್ರರ ಅಮಾನವೀಯತೆಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.

